ಮೈಸೂರು: ಹಿಂದಿ ರಾಷ್ಟ್ರೀಯ ಭಾಷೆ ಅಂತ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡುವುದರ ಜೊತೆಗೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದರು. ಅಜಯ್ ದೇವಗನ್ ಅವರ ಹೇಳಿಕೆಗೆ ನಮ್ಮ ಕಿಚ್ಚ ಸುದೀಪ್ ಸಖತ್ತಾಗಿಯೇ ತಿರುಗೇಟು ನೀಡಿದ್ದರು. ಇದೀಗ ಅವರ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಅವರು ಕೂಡ ಖಂಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಹಿಂದಿ ರಾಷ್ಟ್ರ ಭಾಷೆಯಲ್ಲ. ಅಜಯ್ ದೇವಗನ್ ನೀಡಿದ ಹೇಳಿಕೆ ಅಕ್ಷಮ್ಯ ಅಪರಾಧವಾಗಿದೆ. ರಾಷ್ಟ್ರ ಭಾಷೆಯ ಸ್ಥಾನಮಾನವನ್ನು ನಾವೂ ಯಾವ ಭಾಷೆಗೂ ಕೊಟ್ಟಿಲ್ಲ. ಈ ದೇಶದಲ್ಲಿ ಜನ್ಮತಾಳಿದ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೆ. ಹಿಂದಿ ಇಂಗ್ಲಿಷ್ ಸಂಪರ್ಕ ಭಾಷೆಗಳು. ಈ ಎರಡು ಭಾಷೆಗಳು ಎಲ್ಲಾ ರಾಜ್ಯಗಳಲ್ಲೂ ದ್ವಿತೀಯ ಮತ್ತು ತೃತೀಯ ಭಾಷೆಗಳಾಗಿದೆ.

ಇದನ್ನು ನರೇಂದ್ರ ಮೋದಿ ತಂದಿದ್ದಲ್ಲ. ಮೊದಲಿನಿಂದಲೂ ಜಾರಿಯಲ್ಲಿರುವುದು ಎಂದು ಅಜಯ್ ದೇವಗನ್ ಭಾಷಾ ಪ್ರೀತಿಗೆ ತಿರುಗೇಟು ಕೊಟ್ಟಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿರುವವರು ಖಂಡಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಅಜಯ್ ದೇವಗನ್ ಹೇಳಿಕೆ ಖಂಡಿಸಿದ್ದರು. ಸುದೀಪ್ ಹೇಳಿದ್ದು ಸರಿ ಎಂದಿದ್ದರು. ಇದೀಗ ಸಂಸದ ಪ್ರತಾಪ್ ಸಿಂಹ ಕೂಡ ಖಂಡಿಸಿದ್ದಾರೆ.

