ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬಾರಿ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬಸ್ಥರು ಇದ್ರು. ಆದ್ರೆ ಕುಟುಂಬಸ್ಥರ ಊಹೆಗೂ ಮೀರಿದ ಶಿಕ್ಷೆಯ ಪ್ರಮಾಣವನ್ನ ಕೋರ್ಟ್ ನೀಡಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣನ ಹುಟ್ಟು ಹಬ್ಬ ಇಂದು. ಆದರೆ ಜೈಲಿನಲ್ಲಿಯೇ ಇರುವ ಕಾರಣ, ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿಲ್ಲ. ಅವರಿಗೆ ಅಂತ ಈಗಲೂ ಇರುವ ಅಭಿಮಾನಿಗಳು ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ಆದರೆ ಕುಟುಂಬಸ್ಥರ್ಯಾರು ಜೈಲಿಗೆ ಹೋಗಿ ವಿಶ್ ಮಾಡಿಲ್ಲ.
ಶಿಕ್ಷೆ ಪ್ರಕಟಕ್ಕೂ ಮುನ್ನ ವಾದ – ಪ್ರತಿವಾದವನ್ನ ಕೋರ್ಟ್ ಆಲಿಸಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ, ನಾನು ನನ್ನ ತಂದೆ ತಾಯಿಯನ್ನು ನೋಡಿ ಆರು ತಿಂಗಳಾಗಿದೆ ಎಂದಿದ್ದರು. ಇವತ್ತು ಹುಟ್ಟಿದ ಹಬ್ಬವಾದರೂ ಪೋಷಕರ್ಯಾರು ಜೈಲಿಗೆ ಹೋಗುವ ನೋಡುವುದಾಗಲಿ, ಶುಭಕೋರುವುದಾಗಲಿ ಮಾಡಿಲ್ಲ. ಆದರೆ ಮಗನ ಹುಟ್ಟುಹಬ್ಬಕ್ಕಾಗಿ ರೇವಣ್ಣ ಅವರು ದೇವರ ಮೊರೆ ಹೋಗಿದ್ದಾರೆ.
ಹೆಚ್ ಡಿ ದೇವೇಗೌಡರ ಕುಟುಂಬಸ್ಥರು ದೈವ ಭಕ್ತರು. ಯಾವಾಗಲೂ ದೇವಸ್ಥಾನಗಳಿಗೆ ಹೋಗುವುದು, ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಿಸುತ್ತಾ ಇರುತ್ತಾರೆ. ಮಗ ಜೈಲಿನಲ್ಲಿದ್ದಾರೆ. ಹೀಗಾಗಿ ರೇವಣ್ಣ ಅವರು ಶೃಂಗೇರಿ ಶಾರದಾ ಮಠಕ್ಕೆ ಹೋಗಿದ್ದು, ಅಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಕಳೆದ 50 ವರ್ಷದಿಂದಾನೂ ಶೃಂಗೇರಿ ಶಾರದಾಂಬೆಗೆ ದೊಡ್ಡಗೌಡರ ಕುಟುಂಬಸ್ಥರು ಭಕ್ತರಾಗಿದ್ದಾರೆ. ಈ ಬಾರಿ ಪ್ರಜ್ವಲ್ ರೇವಣ್ಣನಿಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಕಳೆದ ವರ್ಷವೂ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ.

