ಏಳು ಗಂಟೆ ವಿದ್ಯುತ್ ಕೊಡ್ತೀವಿ, ಪವರ್ ಕಟ್ ಮಾತ್ರ ಮಾಡಲ್ಲ : ಚಿತ್ರದುರ್ಗದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು ?

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ರಾಜ್ಯದಲ್ಲಿ ಪವರ್ ಕಟ್ ಇಲ್ಲ. ಏಳು ಗಂಟೆ ವಿದ್ಯುತ್ ಕೊಡುತ್ತೇವೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಹತ್ತೊಂಬತ್ತು ಸಾವಿರ ಮೆ.ವ್ಯಾ. ವಿದ್ಯುತ್ ಬೇಕಾಗುತ್ತದೆ. ಕೆಲವು ಕಡೆ ಓವರ್ ಲೋಡ್ ಆಗಿರುವುದರಿಂದ ವಿದ್ಯುತ್ ಕೊಡುವುದು ಕಷ್ಟವಾದರೂ ಪರವಾಗಿಲ್ಲ. ಪವರ್ ಕಟ್ ಮಾತ್ರ ಮಾಡೋಲ್ಲ. ಜಿಲ್ಲೆಯಲ್ಲಿ ಯಾವ ವಿದ್ಯುತ್ ಸ್ಟೇಷನ್‍ನಲ್ಲಿ ತೊಂದರೆಯಾಗುತ್ತಿದೆ ಎನ್ನುವುದನ್ನು ನನ್ನ ಗಮನಕ್ಕೆ ತಂದರೆ ಸರಿಪಡಿಸಲು ಸುಲಭವಾಗುತ್ತದೆ. ಅಕ್ರಮ-ಸಕ್ರಮಕ್ಕೂ ಟಿ.ಸಿ.ಗೂ ಸಂಬಂಧವಿಲ್ಲ. 2004 ರಿಂದ ಅಕ್ರಮ

ಸಕ್ರಮ ಆರಂಭವಾಯಿತು. ವಿದ್ಯುತ್ ಕೊಡುವುದು ಸ್ವಲ್ಪ ತಡವಾದಾಗ ಅಕ್ರಮ ಶುರುವಾಯಿತು. ನಾಲ್ಕುವರೆ ಲಕ್ಷ ಐ.ಪಿ.ಸೆಟ್‍ಗಳು ಹೀಗಾಗಿದೆ. ಎಸ್.ಆರ್.ರೇಟ್ ರಿವೈಸ್ ಮಾಡಲು ಹೇಳಿದ್ದೇನೆ. ಹಳೆ ಎಸ್.ಆರ್.ರೇಟ್‍ನಲ್ಲಿಯೇ ಟೆಂಡರ್ ಕರೆಯಲು ಆದೇಶಿಸಿದ್ದೇನೆಂದರು.

ನಿರಂತರ ಜ್ಯೋತಿಯಡಿ ಆರು ಗಂಟೆ ನಂತರ ಸಿಂಗಲ್ ಫೇಸ್ ಕರೆಂಟ್ ಕೊಡುತ್ತೇವೆ. ಐ.ಪಿ.ಸೆಟ್‍ಗೆ ಹತ್ತೊಂಬತ್ತು ಸಾವಿರ ಕೋಟಿ ರೂ.ಗಳನ್ನು ನೀಡುತ್ತಿದ್ದೇವೆ. ಗೃಹಜ್ಯೋತಿಗೆ 12 ಸಾವಿರ ಕೋಟಿ ರೂ.ಗಳನ್ನು ಕೊಡುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರೆಂಟಿಗಳಿಗೆ 60 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ. ಉಚಿತ ಗ್ಯಾರೆಂಟಿಗಳಿಂದ ಸರ್ಕಾರಕ್ಕೆ ನಷ್ಟವಾಗಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕೇಂದ್ರಕ್ಕೆ ನಾಲ್ಕು ಲಕ್ಷ ಕೋಟಿ ರೂ.ಗಳ ತೆರಿಗೆ ಕಟ್ಟುತ್ತಿದ್ದೇವೆ. ಕೋಮುವಾದಿ ಬಿಜೆಪಿ.ಯವರು ಸತ್ಯ ಸಂಗತಿ ಹೇಳಲ್ಲ. ಕಾಂಗ್ರೆಸ್‍ನ್ನು ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆಂದು ವಿರೋಧಿಗಳ ಆಪಾದನೆಗೆ ತಿರುಗೇಟು ನೀಡಿದರು.

1969 ರಿಂದಲೂ ಪಕ್ಷದಲ್ಲಿದ್ದೇನೆ. ಎಲ್ಲಾ ಜಾತಿ ಧರ್ಮದವರಿಗೂ ಅಧಿಕಾರ ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಜನಪರ ಕಾರ್ಯಕ್ರಮ ನಮ್ಮದು. ನೆಹರು, ಇಂದಿರಾಗಾಂಧಿ, ರಾಜೀವ್‍ಗಾಂಧಿಯಿಂದ ಹಿಡಿದು ಅನೇಕ ಹಿರಿಯರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಅಧಿಕಾರದಲ್ಲಿರುವಾಗ ಹತ್ತು ಜನಕ್ಕೆ ಒಳ್ಳೆಯದು ಮಾಡಬೇಕೆನ್ನುವುದು ಕಾಂಗ್ರೆಸ್ ಧ್ಯೇಯ. ವಿದ್ಯುತ್ ಇಲಾಖೆಯಲ್ಲಿ ಏನಾದರೂ ಅಕ್ರಮವಾಗಿದ್ದರೆ ನನಗೆ ತಿಳಿಸಿ ಎಂದು ಕಾರ್ಯಕರ್ತರಲ್ಲಿ ಕೆ.ಜೆ.ಜಾರ್ಜ್ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಸದಾ ಬರಗಾಲವನ್ನು ಎದುರಿಸಿಕೊಂಡು ಬರುತ್ತಿದೆ. ಹಾಗಾಗಿ ರೈತರಿಗೆ ತೊಂದರೆಯಾಗದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಕೊಡಿ ಎಂದು ಸಚಿವ ಜಾರ್ಜ್‍ರವರಲ್ಲಿ ವಿನಂತಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮಾಜಿ ಶಾಸಕ ಎ.ವಿ.ಉಮಾಪತಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್

ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ವಿಧಾನಪರಿಷತ್ ಮಾಜಿ ಸದಸ್ಯ ಜಯಮ್ಮ ಬಾಲರಾಜ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೊಹಿದ್ದೀನ್, ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್, ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ತಾಲ್ಲೂಕು ಅಧ್ಯಕ್ಷ
ಆರ್.ಪ್ರಕಾಶ್, ಜಿ.ವಿ.ಮಧುಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್ ವೇದಿಕೆಯಲ್ಲಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಬಿ.ರಾಜಪ್ಪ, ಹೆಚ್.ಅಂಜಿನಪ್ಪ, ಸೈಯದ್ ವಲಿಖಾದ್ರಿ, ಅಕ್ಬರ್, ಪರ್ವಿನ್, ಸುಧಾ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks