ಜನಸಂಖ್ಯೆ ಹೆಚ್ಚಳದಿಂದ ಬಡತನ ಹಾಗೂ ನಿರುದ್ಯೋಗ : ಡಾ. ಬಿ.ವಿ.ಗಿರೀಶ್

1 Min Read
ಚಿತ್ರದುರ್ಗ. ಜೂನ್. 23:  ಜನಸಂಖ್ಯೆ ಹೆಚ್ಚಳದಿಂದ ಬಡತನ, ನಿರುದ್ಯೋಗ ಪ್ರಮಾಣವು ಹೆಚ್ಚಾಗುತ್ತದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ.ಗಿರೀಶ್ ಹೇಳಿದರು.
 ತಾಲೂಕಿನ ವಿಜಾಪುರ ಗ್ರಾಮದ ಶಬರ ಶಂಕರ ವಸತಿ ಪ್ರೌಢಶಾಲೆಯಲ್ಲಿ ಸೋಮವಾರ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ, ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಿದಂತೆ ಆಹಾರ, ನೀರು, ಬಟ್ಟೆ, ಕೊರತೆಯಾಗಿ ವಾಯು ಜಲ ಮಾಲಿನ್ಯ, ಶಿಕ್ಷಣದ ಕೊರತೆ ಉಂಟಾಗಿ ಸಾಂಕ್ರಾಮಿಕ ರೋಗಗಳು ತಲೆದೋರುತ್ತವೆ. ಜನಸಂಖ್ಯೆ ನಿಯಂತ್ರಣ ಮಾಡಿದಲ್ಲಿ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಬಹುದು. ಮದುವೆಯ ವಯಸ್ಸು ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ, ಬಾಲ್ಯಾವಸ್ಥೆಯಲ್ಲಿ ಇದರ ಬಗ್ಗೆ ಮಾಹಿತಿ ತಿಳಿದು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ ಜನಸಂಖ್ಯಾ ಹೆಚ್ಚಳ ದೇಶಾಭಿವೃದ್ಧಿಗೆ ಮಾರಕ ಕುಟುಂಬದ ಗಾತ್ರ ಹೆಚ್ಚು ಇದ್ದಲ್ಲಿ ಶಿಕ್ಷಣದ ಕೊರತೆ, ಅರಣ್ಯನಾಶ, ಆಹಾರದ ಕೊರತೆ, ವಾಯು, ನೆಲ, ಜಲ ಕಲುಷಿತಗೊಂಡು ಜೀವಸಂಕುಲಕ್ಕೆ ಭಾರಿ ಹೊಡೆತ ಉಂಟಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ವಿದ್ಯಾರ್ಥಿ ದೆಸೆಯಲ್ಲಿ ಜನಸಂಖ್ಯಾ ಶಿಕ್ಷಣ ತುಂಬಾ ಅವಶ್ಯಕವಾದದ್ದು, ಜನಸಂಖ್ಯಾ ಸ್ಫೂಟಕ್ಕೆ ಬಾಲ್ಯ ವಿವಾಹವು ಒಂದು ಕಾರಣ. ಯಾವುದೇ ಒತ್ತಡಕ್ಕೆ ಮಣಿಯಬೇಡಿ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬೇಡಿ ಎಂದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಮುಖ್ಯೋಪಾಧ್ಯಾಯ ಸಣ್ಣತಿಪ್ಪಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಆಶಾ ಕಾರ್ಯಕರ್ತೆ ಮಮತಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks