ಚಿತ್ರದುರ್ಗ. ಫೆ.10 : ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ರೈತರು ಕೆರೆಯ ಹೂಳು ಅಥವಾ ಮಣ್ಣನ್ನು ಬಳಸಿಕೊಳ್ಳಲು ಸಂಬಂಧ ಪಟ್ಟವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜರುಗಿದ ಗಣಿಗಾರಿಕೆ ಸಂಬAಧಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.
ರೈತರು ತಮ್ಮ ಜಮೀನಿನ ಕೃಷಿ ಉದ್ದೇಶಕ್ಕಾಗಿ ಮಣ್ಣು ಪಡೆಯುವ ಮೊದಲು ಕೆರೆಯ ಮಾಲೀಕತ್ವ ಹೊಂದಿರುವ ಸಣ್ಣ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಥವಾ ಗ್ರಾಮ ಪಂಚಾಯತಿಯಿAದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಅನುಮತಿ ಕೋರುವಾಗ ರೈತರು ತಮ್ಮ ಜಮೀನಿನ ಖಖಿಅ (ಪಹಣಿ) ಮತ್ತು ಕೃಷಿ ಚಟುವಟಿಕೆಯ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಕೃಷಿ ಉದ್ದೇಶಕ್ಕಾಗಿ ಕೇವಲ ಟ್ರಾಕ್ಟರ್ಗಳ ಮೂಲಕ ಮಾತ್ರ ಮಣ್ಣು ಸಾಗಿಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಟ್ರಕ್ ಅಥವಾ ಲಾರಿಗಳನ್ನು ಬಳಸುವಂತಿಲ್ಲ. ಮಣ್ಣು ತೆಗೆಯುವಾಗ ಕೆರೆಯ ಒಳಭಾಗದಲ್ಲಿ ಒಂದು ಮೀಟರ್ಗಿಂತ ಹೆಚ್ಚು ಆಳಕ್ಕೆ ಗುಂಡಿ ತೋಡುವಂತಿಲ್ಲ. ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಇದು ಕೆರೆಯ ಮೂಲ ವಿನ್ಯಾಸಕ್ಕೆ ಧಕ್ಕೆ ತರದಂತೆ ಇರಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಕಠಿಣ ಕ್ರಮ:
ಯಾವುದೇ ವ್ಯಕ್ತಿ ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಗುತ್ತಿಗೆ ಆಧಾರಿತ ಕಾಮಗಾರಿಗಳಿಗಾಗಿ ಕೆರೆ ಮಣ್ಣು ಅಥವಾ ಗ್ರ್ಯಾವೆಲ್ ಬಳಸುತ್ತಿದ್ದರೆ, ಅವರು ಕಡ್ಡಾಯವಾಗಿ ಗಣಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಂತಹ ಬಳಕೆಗೆ ನಿಗದಿಪಡಿಸಿದ ರಾಜಧನ ಸರ್ಕಾರಕ್ಕೆ ಪಾವತಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಮೀರಿ ಯಾರಾದರು ಮಣ್ಣು ಸಾಗಿಸಿದರೆ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಇಒಗಳು, ಗಣಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀಡಿದರು.
ಅನಗತ್ಯ ಮಣ್ಣು ಪರೀಕ್ಷೆ ಬೇಡ:
ರೈತರು ತಮ್ಮ ತೋಟ ಅಥವಾ ಜಮೀನಿಗೆ ಕೆರೆಯ ಮಣ್ಣನ್ನು ಸಾಗಿಸುವಾಗ, ಆ ಮಣ್ಣಿನಲ್ಲಿರುವ ಖನಿಜಾಂಶಗಳ ಬಗ್ಗೆ ವರದಿ ಕೇಳುವುದು ಅಥವಾ ಪರೀಕ್ಷಿಸುವುದು ಅನಗತ್ಯ. ರೈತರು ಕೃಷಿ ಚಟುವಟಿಕೆಗಾಗಿ ಮಣ್ಣು ಬಳಸುತ್ತಿದ್ದರೆ, ಅದರಲ್ಲಿ ಯಾವ ಖನಿಜಾಂಶ ಇದೆ ಎಂದು ಪರೀಕ್ಷಿಸುವ ಅವಶ್ಯಕತೆಯಿಲ್ಲ. ಮಣ್ಣನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಅಥವಾ ಮಾರಾಟ ಮಾಡುತ್ತಿದ್ದರೆ ಮಾತ್ರ ಗಣಿ ಇಲಾಖೆಯ ನಿಯಮಗಳ ಪ್ರಕಾರ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ವರದಿ ನೀಡುವುದರಿಂದ ಸರ್ಕಾರದ ಮಟ್ಟದಲ್ಲಿ ತಪ್ಪು ಸಂದೇಶ ಹೋಗುತ್ತದೆ. ಗೊಂದಲ ಉಂಟಾಗುತ್ತದೆ. ಅಧಿಕಾರಿಗಳು ಈ ಕುರಿತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಅನಧಿಕೃತ ಗಣಿಗಾರಿಕೆ ಕಡಿವಾಣ ಟಾಸ್ಕ್ ಪೋರ್ಸ್ ಕಾರ್ಯಾಚರಣೆ:
ಗೋಮಾಳ ಮತ್ತು ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುವುದನ್ನು ತಡೆಯಲು ಜಿಲ್ಲಾ ಮತ್ತು ತಾಲ್ಲೂಕು ಹಂತದ ಟಾಸ್ಕ್ ಪೋರ್ಸ್ಗಳು ಕ್ರೀಯಾಶೀಲವಾಗಿ ಕೆಲಸ ಮಾಡಬೇಕು. ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕಬೇಕು.ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಓ, ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಾರಕೊಮ್ಮೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಅದಿರು ಸಾಗಾಣಿಕೆ ವಾಹನಗಳಿಗೆ ನಿಯಂತ್ರಣ
ಭೀಮಸಮುದ್ರ, ಬೊಮ್ಮೇನಹಳ್ಳಿ ಸೇರಿದಂತೆ ಗಣಿಲಾರಿಗಳು ಸಾಗುವ ಗ್ರಾಮಸ್ಥರು ಅಧಿರು ಸಾಗಟದಿಂದ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಗಣಿಲಾರಿಗಳು ನಿಗದಿತ ತೂಕಕ್ಕಿಂತ ಹೆಚ್ಚು ಅಧಿರು ಸಾಗಾಟ ಮಾಡುತ್ತಿವೆ. ಅದಿರನ ಮೇಲೆ ನೀರು ಸಿಂಪಡಿಸುವುದಿಲ್ಲ. ತಾಡಪಲ್ ಮುಚ್ಚುವುದಿಲ್ಲ. ಗಣಿ ಧೂಳು ಕೃಷಿ ಬೆಳೆಗಳ ಮೇಲೆ ಬಿದ್ದು ಬೆಳೆ ನಾಶವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೆಚ್ಚುವರಿಯಾಗಿ ಗಣಿ ಅಧಿರು ಸಾಗಾಟ ಮಾಡುವ ಹಾಗೂ ನಿಯಮ ಪಾಲಿಸದ ಲಾರಿಗಳ ವಿರುದ್ದ ಕಾರ್ಯಾಚರಣೆ ನಡೆಸಬೇಕು. ಗಣಿ ಬಾಧಿತ ಪ್ರದೇಶದಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರ್ಓ ಘಟಕಗಳನ್ನು ಅಭಿವೃದ್ಧಿ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಸಭೆಯಲ್ಲಿ ಗಣಿ, ಮರಳು, ಕ್ರಷರ್ ಪರವಾನಿಗೆ, ರಾಜಧನ ಸಂಗ್ರಹ ಕುರಿತು ಚರ್ಚಿಸಲಾಯಿತು. ಜಿ.ಪಂ.ಸಿಇಓ ಡಾ.ಆಕಾಶ್,ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್,ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಕಾಳೆ ಸಿಂಘೇ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

