ಮೈಸೂರು: ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆದರೆ ಈ ಬಾರಿ ಎರಡನೇ ಸಲ ಮುಖ್ಯಮಂತ್ರಿಯಾದ ಮೇಲೆ ಮೂಡಾ ಹಗರಣ ಸುತ್ತಿಕೊಂಡಿದೆ. ಈ ಒಂದು ಪ್ರಕರಣ ಸಿಎಂ ಸ್ಥಾನಕ್ಕೆ ಕುತ್ತು ತಂದಿದೆ. ವಿಪಕ್ಷ ನಾಯಕರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದಾರೆ. ತನಿಖೆ ಎದುರಿಸುತ್ತೇನೆ, ಆದರೆ ರಾಜೀನಾಮೆ ಕೊಡಲ್ಲ ಎಂದಿದ್ದಾರೆ.
ಇದೀಗ ಆ ಸೈಟ್ ಗಳನ್ನು ವಾಪಾಸ್ ನೀಡಲು ಪಾರ್ವತಿ ಅವರು ಸಿದ್ದರಾಗಿದ್ದಾರೆ. ಮೂಡಾ ನಿವೇಶನ ಆರೋಪ ರಾಜಕೀಯ ಸಂಚು ಎಂದುಕೊಂಡಿದ್ದೆ. ಈ ಆರೋಪ ಕೇಳಿ ಬಂದಾಗಲೇ ವಾಪಾಸ್ ಮಾಡಬೇಕು ಎಂದುಕೊಂಡೆ. ಆದರೆ ಎದುರಾಳಿಗಳ ಸಂಚಿಗೆ ಬಲಿಯಾಗಬಾರದೆಂಬ ಆಪ್ತರ ಮಾತಿಗೆ ಸುಮ್ಮನೆ ಆದೆ. ಈಗ ಪತಿಯ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದಾಗ ವಾಪಾಸ್ ನೀಡಲು ನಿರ್ಧರಿಸಿದ್ದೇನೆ. ಇದು ಮಗನಿಗಾಗಲೀ, ಪತಿಯ ಜೊತೆಗಾಗಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾತನಾಡಿ, ನನ್ನ ನಾಲ್ಕು ದಶಕಗಳ ಸುಧೀರ್ಘ ರಾಜಕೀಯದಲ್ಲಿ ಎಂದು ಕೂಡ ಮಧ್ಯಪ್ರವೇಶಿಸದ ನನ್ನ ಧರ್ಮಪತ್ನಿ, ನನ್ನ ವಿರುದ್ಧ ದ್ವೇಷದ ರಾಜಕಾರಣಕ್ಕೆ ಮಾನಸಿಕವಾಗಿ ಹಿಂಸೆ ಅನುಭವಿಸುವಂತೆ ಆಗಿದೆ. ಇದಕ್ಕೆ ನನ್ನ ವಿಷಾಧವಿದೆ. ಹೀಗಿದ್ದರು ಸೈಟ್ ಗಳನ್ನು ಹಿಂತಿರುಗಿಸುವ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.

ಸೈಟ್ ವಾಪಾಸ್ ಕೊಡಿಸುವುದರಿಂದ ಕಾನೂನಾತ್ಮಕ ಹೋರಾಟಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಸುಪ್ರೀಂ ಕೋರ್ಟ್ ಹೋಗುವ ಸ್ಥಿತಿ ಬಂದರೆ, ಅಲ್ಲಿ ಸೈಟ್ ವಾಪಾಸ್ ನೀಡಿರುವ ಬಗ್ಗೆಯೂ ವಾದ ಮಂಡಿಸಬಹುದು.












