ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಯಪಡುತ್ತಿರುವ ಪಾಕಿಸ್ತಾನ : ಗಡಿಯಲ್ಲಿ ಹೈ ಅಲರ್ಟ್..!

ಸುದ್ದಿಒನ್ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಈಗ ಭಾರತದ ಬಗ್ಗೆ ಭಯಪಡುತ್ತಿರುವಂತೆ ಕಾಣುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಈ ದಾಳಿಗೆ ಭಾರತ ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನ ಭಾವಿಸುತ್ತಿದೆ. ಈ ಸಂದರ್ಭದಲ್ಲಿ, ಈ ಭಯೋತ್ಪಾದಕ ದಾಳಿಯಿಂದ ಎಚ್ಚೆತ್ತುಕೊಂಡಿರುವ ಪಾಕಿಸ್ತಾನವು ತನ್ನ ಸೇನೆಯನ್ನು ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ಗಡಿಗಳಿಗೆ ಯುದ್ಧ ವಿಮಾನಗಳನ್ನು ನಿಯೋಜಿಸುತ್ತಿದೆ ಎಂಬ ಸುದ್ದಿ ಈಗ ತೀವ್ರ ಚರ್ಚೆಯ ವಿಷಯವಾಗಿದೆ. ವಿಮಾನಗಳ ಟ್ರ್ಯಾಕಿಂಗ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಮತ್ತೊಮ್ಮೆ ಎರಡೂ ದೇಶಗಳ ನಡುವೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ.

ಪಹಲ್ಗಾಮ್ ಘಟನೆಯಿಂದ ಎಚ್ಚೆತ್ತ ಪಾಕಿಸ್ತಾನ ಸೇನೆಯು ಕರಾಚಿಯಿಂದ ತನ್ನ ಫೈಟರ್ ಜೆಟ್‌ಗಳನ್ನು ಉತ್ತರದಲ್ಲಿರುವ ವಾಯುನೆಲೆಗಳಿಗೆ ಕಳುಹಿಸಿದೆ ಎಂಬ ವರದಿಗಳಿವೆ. ವಿಮಾನ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ ನೆಟ್ಟಿಗರು X ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸ್ಕ್ರೀನ್‌ಶಾಟ್‌ಗಳಲ್ಲಿನ ವಿವರಗಳ ಪ್ರಕಾರ, ಪಾಕಿಸ್ತಾನದ ಫೈಟರ್ ಜೆಟ್‌ಗಳು ಕರಾಚಿಯ ದಕ್ಷಿಣ ವಾಯುಪಡೆಯಿಂದ ಉತ್ತರದ ಲಾಹೋರ್ ಮತ್ತು ರಾವಲ್ಪಿಂಡಿ ನಗರಗಳ ಬಳಿಯ ವಾಯುನೆಲೆಗಳ ಕಡೆಗೆ ಹಾರುತ್ತಿವೆ ಎಂದು ವರದಿಯಾಗಿದೆ. ಪಾಕಿಸ್ತಾನಕ್ಕೆ ಅತ್ಯಂತ ನಿರ್ಣಾಯಕವಾದ ನೂರ್ ಖಾನ್ ನೆಲೆಯು ರಾವಲ್ಪಿಂಡಿಯಲ್ಲಿದೆ. ಇದು ನಮ್ಮ ದೇಶದ ಗಡಿಯ ಬಳಿ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳು ಕಣ್ಗಾವಲು ಮತ್ತು ವಿಐಪಿ ಸಾಗಣೆಗೆ ಬಳಸುವ ಲಾಕ್‌ಹೀಡ್ ಸಿ-130 ಹರ್ಕ್ಯುಲಸ್ ಸಾರಿಗೆ ವಿಮಾನ ಮತ್ತು ಎಂಬ್ರೇರ್ ಎಫ್-100 ಜೆಟ್ ವಿಮಾನಗಳು
ಇರುವುದು ಕಂಡುಬರುತ್ತಿದೆ.

2019 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಮೋದಿ ಸರ್ಕಾರ ಬಲವಾಗಿ ಪ್ರತಿಕ್ರಿಯಿಸಿತ್ತು. ಮತ್ತು ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಗುಂಪಿನ ತರಬೇತಿ ಕೇಂದ್ರಗಳ ಮೇಲೆ ವಾಯುದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆಯು ಹಿಂದಿನ ಪ್ರತೀಕಾರದ ದಾಳಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾಗರೂಕರಾಗಿರುವಂತೆ ಕಂಡು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *