ಗೋವುಗಳನ್ನು ಜೋಪಾನವಾಗಿ ರಕ್ಷಣೆ ಮಾಡುವುದು ನಮ್ಮ ಉದ್ದೇಶ ; ನಾಗರಾಜ್ ಭಟ್

suddionenews
2 Min Read

ಚಿತ್ರದುರ್ಗ : ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನ ಬರೀ ಧಾರ್ಮಿಕ ಕಾಯಕ್ರಮಗಳಿಗಷ್ಟೆ ಮೀಸಲಾಗದೆ ನಾಲ್ಕು ವರ್ಷಗಳ ಹಿಂದೆ ಗೋಶಾಲೆ ಆರಂಭಿಸಿ ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ಆರೈಕೆ ಮಾಡುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿದೆ.

ಕಂದು, ಬಿಳಿ, ಬೂದು ಕಪ್ಪು ಮಿಶ್ರಿತ ಐವತ್ತು ಹಸುಗಳು, 20 ಕರುಗಳು ಈ ಗೋಶಾಲೆಯಲ್ಲಿವೆ. ನೋಡಲು ಅತ್ಯಾಕರ್ಷವಾಗಿರುವ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೊರಗಿನವರು ಬರುವುದುಂಟು.

ದೇಶಿ ತಳಿಗಳ ಗೋಮಯದಿಂದ ಪಂಚಗವ್ಯ ಸೋಪು, ಧೂಪಗಳು, ಭರಣಿ, ಗೋಅರ್ಕ ಇವುಗಳನ್ನು ತಯಾರಿಸಲಾಗುವುದು. ಈ ಗೋವುಗಳಿಂದ ಸಿಗುವ ಹಾಲು ಬೆಣ್ಣೆ, ತುಪ್ಪವನ್ನು ಮಾರಾಟ ಮಾಡಿ ಅವುಗಳಿಂದ ಬರುವ ಆದಾಯವನ್ನು ಗೋವುಗಳ ಸಾಕಾಣಿಕೆಗೆ ಬಳಸಲಾಗುತ್ತಿದೆ. ಆರಂಭದಲ್ಲಿ ಹದಿನೈದು ಹಸು, ನಂತರ ಮೂರು ಬಾರಿ ಮೂವತ್ತು ಹಸುಗಳನ್ನು ಗುಜರಾತಿನಿಂದ ತರಲಾಗಿದೆ. ಎರಡು ಸಾವಿರದ ಐದುನೂರು ಕಿ.ಮೀ.ನಿಂದ ಒಂದು ಹಸುವನ್ನು ಇಲ್ಲಿಗೆ ತರಲು ಬಾಡಿಗೆ ಸೇರಿ ಒಂದು ಲಕ್ಷ ರೂ.ಗಳ ವೆಚ್ಚವಾಗಲಿದೆ ಎಂದು ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಭಟ್ ಗೋಶಾಲೆ ನಿರ್ವಹಣೆಯಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಗೋವುಗಳನ್ನು ಗೋಮಾತೆ ಎಂದು ಹಿಂದೂಗಳು ಪೂಜಿಸುವುದರಿಂದ ಯಾವ ಕಾರಣಕ್ಕೂ ಗೋವುಗಳು ಕಟುಕರೆ ಕೈಗೆ ಹೋಗಬಾರದೆಂಬ ಮಹದಾಸೆಯಿಂದ ಗೋಶಾಲೆ ತೆರೆದು ಗೋವುಗಳನ್ನು ಜೋಪಾನವಾಗಿ ರಕ್ಷಣೆ ಮಾಡುವುದು ನಮ್ಮ ಉದ್ದೇಶ. ದಿನವೂ ಗೋವುಗಳಿಗೆ ಹಸಿರು ಮೇವುಗಳನ್ನು ಹಾಕುತ್ತೇವೆ. ಇದರಿಂದ ಹಾಲಿನ ವೃದ್ದಿಯಾಗಲಿದೆ. ಯಾವುದೇ ರೀತಿಯ ರೋಗಗಳು ಹರಡಿದರೆ ತಕ್ಷಣವೇ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದರಿಂದ ಇಲ್ಲಿನ ಎಲ್ಲಾ ಗೋವುಗಳು ಆರೋಗ್ಯವಾಗಿವೆ. ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿ ಹಸುಗಳಿಂದ ಪ್ರಕೃತಿಗೂ ಸಾಕಷ್ಟು ಪ್ರಯೋಜನವಾಗಲಿದೆ. ದೇವಸ್ಥಾನದ ಭಕ್ತರು ಹಾಗೂ ಗ್ರಾಹಕರುಗಳಿಂದ ಹಾಲು, ಬೆಣ್ಣೆ, ತುಪ್ಪಕ್ಕೆ ಬೇಡಿಕೆಯಿದೆ. ಗೋವುಗಳ ಉತ್ಪನ್ನಗಳನ್ನು ಮನೆ ಮನೆಗೆ ಮಾರಾಟ ಮಾಡಿ ಬರುವ ವರಮಾನವನ್ನು ಗೋಸೇವೆಗೆ ಬಳಸುತ್ತೇವೆ. ಉತ್ತರ ಭಾರತದ ಮೂವರು ಹಾಗೂ ಸ್ಥಳೀಯ ಇಬ್ಬರು ಗೋಶಾಲೆಯಲ್ಲಿ ಗೋವುಗಳಿಗೆ ಸಮಯಕ್ಕೆ ಸರಿಯಾಗಿ ಮೇವು ನೀರು ಒದಗಿಸುವ ಕೆಲಸದಲ್ಲಿ ತೊಡಗಿದ್ದಾರೆಂದು ಗೋವುಗಳ ಬಗ್ಗೆ ತಮಗಿರುವ ಕಾಳಜಿಯನ್ನು ನಾಗರಾಜ್‍ಭಟ್ ವ್ಯಕ್ತಪಡಿಸಿದರು.

ಬಿಳಿ ಬೂದು ಬಣ್ಣದ ಎರಡು ಹೋರಿಗಳು ಮಾತ್ರ ನೋಡಲು ಭಯ ಹುಟ್ಟಿಸುವಂತಿವೆ. ಅಗಲವಾದ ದಪ್ಪನೆ ಕೋಡುಗಳು ಆಕರ್ಷಣೀಯವಾಗಿವೆ. ಹೊಸಬರು ಯಾರಾದರೂ ಹತ್ತಿರ ಹೋದರೆ ಇನ್ನೇನು ತಿವಿದೆಬಿಡುತ್ತವೇನೋ ಎನ್ನುವಂತೆ ಬುಸುಗುಟ್ಟುತ್ತವೆ. ಆದರೆ ಅಷ್ಟೆ ಮೃದು ಸ್ವಭಾವ ಕೂಡ. ಇವುಗಳ ಲಾಲನೆ ಪಾಲನೆಯಲ್ಲಿ ತೊಡಗಿರುವವರೊಂದಿಗೆ ಹೊಂದಿಕೊಂಡಿವೆ. ಇಲ್ಲಿನ ಗೋವುಗಳನ್ನು ನೋಡಲು ಹೊರಗಿನಿಂದ ಬರುವ ಹೊಸಬರು ಮಾತ್ರ ದೂರವೇ ನಿಂತು ಬಣ್ಣದ ಬಣ್ಣದ  ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ವೀಕ್ಷಿಸಿ ಆನಂದಪಡುವುದುಂಟು.

Share This Article
Leave a Comment

Leave a Reply

Your email address will not be published. Required fields are marked *