ಮುಖ್ಯಮಂತ್ರಿಗಳ ಬಳಿ ಪಿಂಜಾರ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ : ಸಚಿವ ಡಿ.ಸುಧಾಕರ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಸಣ್ಣಪುಟ್ಟ ಸಮಾಜವನ್ನು ಗೌರವದಿಂದ ಕಾಣುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಿಂಜಾರ ಜನಾಂಗವನ್ನು ಯಾವತ್ತು ನಿರ್ಲಕ್ಷಿಸಿಲ್ಲ. ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಪರವಾಗಿದೆ. ಚಿಂತಿಸುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಿಂಜಾರ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಿದರು.

ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ 33 ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ವಕೀಲರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮೊದಲಿನಿಂದಲೂ ನಮ್ಮ ಕುಟುಂಬ ಪಿಂಜಾರ ಸಮಾಜದೊಂದಿಗೆ ಅನ್ಯೋನ್ಯವಾಗಿದೆ. ಶ್ರದ್ದೆ, ಔದಾರ್ಯ, ಸ್ವಾಭಿಮಾನವುಳ್ಳ ಸಮಾಜ ನಿಮ್ಮದು. ನಾನು ನಾಲ್ಕು ಬಾರಿ ಶಾಸಕನಾಗಲು ಪಿಂಜಾರ ಸಮುದಾಯದ ಕೊಡುಗೆಯಿದೆ. ಮುಖ್ಯಮಂತ್ರಿಗಳ ಬಳಿ ನಿಮ್ಮ ಸಮಸ್ಯೆ ಬೇಡಿಕೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಿಸುತ್ತೇನೆಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ತತ್ವ ಸಿದ್ದಾಂತಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಓಟಿನ ರಾಜಕಾರಣ ಮಾಡುವವರಲ್ಲ. ಎಲ್ಲಾ ಜಾತಿ ಧರ್ಮದವರ ಪರವಾಗಿರುವ ಮುಖ್ಯಮಂತ್ರಿಗಳು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುತ್ತಾರೆಂಬ ನಂಬಿಕೆಯಿದೆ. ಹಳ್ಳಿಗಳಲ್ಲಿ ಎಲ್ಲರ ಜೊತೆ ಹೊಂದಿಕೊಳ್ಳುವ ದೊಡ್ಡ ಗುಣ ನಿಮ್ಮದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ಸಮಾಜ ನಿಮ್ಮದು. ನಿಮ್ಮಲ್ಲಿಯೂ ಅನೇಕ ಪ್ರತಿಭಾವಂತರಿದ್ದಾರೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ರಾಜಕಾರಣಿಗಳು ಕಿವುಡರಾಗಿರುತ್ತಾರೆ. ಅವರಿಗೆ ಕೇಳಿಸುವ ರೀತಿಯಲ್ಲಿ ನಿಮ್ಮ ಬೇಡಿಕೆಗಳನ್ನು ಸಲ್ಲಿಸಬೇಕಾದರೆ ಮೊದಲು ನೀವುಗಳು ಸಂಘಟಿತರಾಗಿ ಹೋರಾಡಬೇಕೆಂದು ಪಿಂಜಾರ ಜನಾಂಗಕ್ಕೆ ಕರೆ ನೀಡಿದರು.

ಸೀಬಾರದ ಸಮೀಪ, ರೈಲ್ವೆ ನಿಲ್ದಾಣದ ಹತ್ತಿರ ಟೆಂಟ್‍ಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳ ಜೊತೆ ಕೆಲವು ಪಿಂಜಾರ ಜನಾಂಗದವರು ಇದ್ದಾರೆ. ಚಳಿ, ಮಳೆ, ಗಾಳಿ ಎಲ್ಲವನ್ನು ಸಹಿಸಿಕೊಂಡು ಅತ್ಯಂತ ನಿರ್ಲಕ್ಷೆಯಿಂದ ಬದುಕುತ್ತಿರುವವರನ್ನು ಆಳುವ ಸರ್ಕಾರಗಳು ಮೊದಲಿನಿಂದಲೂ ಕಡೆಗಣಿಸುತ್ತಲೆ ಬರುತ್ತಿರುವುದು ನೋವಿನ ಸಂಗತಿ. ಸಣ್ಣ ಸಣ್ಣ ಜನಾಂಗಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸ್ಥಾನಮಾನ ಸಿಗಬೇಕು. ಇಲ್ಲವಾದಲ್ಲಿ ಬದುಕಿದ್ದು, ಏನು ಪ್ರಯೋಜನ. ಸಾಮಾಜಿಕ ನ್ಯಾಯಕ್ಕಾಗಿ ನೀವುಗಳು ಒಗ್ಗಟ್ಟಾಗಬೇಕೆಂದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಆಗ ಮಾತ್ರ ಉದ್ದಾರ ಸಾಧ್ಯ. ಮುರುಘಾಮಠ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‍ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ಹದಿನೈದರಿಂದ ಇಪ್ಪತ್ತು ಲಕ್ಷದಷ್ಟು ಜನಸಂಖ್ಯೆಯಿರುವ ಪಿಂಜಾರ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದೆ. ನಮ್ಮ ಬೇಡಿಕೆಗಳನ್ನು ಸಲ್ಲಿಸುವುದಕ್ಕಾಗಿ ಎರಡು ಮೂರು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋದರು ಅವಕಾಶ ಸಿಗಲಿಲ್ಲ. ನ.20 ರೊಳಗೆ ಮುಖ್ಯಮಂತ್ರಿಗಳನ್ನು ಕಾಣಲು ನಮಗೆ ಅವಕಾಶ ಕೊಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‍ರವರಲ್ಲಿ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಅಬ್ದುಲ್‍ಜಬ್ಬಾರ್, ವಕ್ಫ್‍ಬೋರ್ಡ್ ಮಾಜಿ ಚೇರ್ಮನ್ ಕೆ.ಅನ್ವರ್‍ಪಾಷ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಗರೀಬ್‍ಆಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕೆ.ಪಿ.ಸಿ.ಸಿ. ಸದಸ್ಯ ಎ.ಎಂ.ಅಮೃತೇಶ್ವರಸ್ವಾಮಿ, ಶಕೀಲ್‍ನವಾಜ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಎಸ್.ರಷೀದ್, ಮೌಲಾಸಾಬ್ ಬೆಂಡಿಗೇರಿ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

Share This Article
Enable Notifications OK No thanks