ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ತುಡಿಯುವ ಮನಸ್ಸಿರಬೇಕು :ಎಸ್.ಎನ್.ಪತ್ತಾರ್

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಸಮಾಜದ ಅಭಿವೃದ್ದಿಗೆ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಒಳ್ಳೆಯ ನಾಯಕನಾಗಿ ಬೆಳೆಯಲು ಸಾಧ್ಯ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಎಸ್.ಎನ್.ಪತ್ತಾರ್ ಹೇಳಿದರು.

ನೆಹರು ಯುವ ಕೇಂದ್ರ, ರಂಗ ಭಂಡಾರ ಕಲಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ರುಡ್‍ಸೆಟ್‍ನಲ್ಲಿ ಏರ್ಪಡಿಸಲಾಗಿದ್ದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಯಾರು ಜೀವನದಲ್ಲಿ ಶ್ರದ್ದೆ ಮತ್ತು ಶ್ರಮ ವಹಿಸುತ್ತಾರೋ ಅವರು ಮಾತ್ರ ತುಂಬಾ ಎತ್ತರಕ್ಕೆ ಬೆಳೆಯಬಹುದು. ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣವಿರುತ್ತದೆ. ಸ್ವತಃ ಅವರುಗಳೆ ಅದನ್ನು ಹೊರತರಬೇಕು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ತುಡಿಯುವ ಮನಸ್ಸಿದ್ದಾಗ ನಾಯಕತ್ವದ ಗುಣ ಹೊರಬರುತ್ತದೆ. ಆಗ ಸಮಾಜ ಗುರುತಿಸಿ ಗೌರವಿಸುತ್ತದೆ ಎಂದು ತಿಳಿಸಿದರು.

ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಎನ್.ಸುಹಾಸ್ ಮಾತನಾಡಿ ಮೂರು ದಿನಗಳ ಕಾಲ ನಡೆಯುವ ತರಬೇತಿಯ ಅವಧಿಯಲ್ಲಿ ವ್ಯಕ್ತಿತ್ವ ವಿಕಾಸನ, ಯೋಗ ಶಿಕ್ಷಣ, ನಾಯಕತ್ವ ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಚಾರಗಳನ್ನು ಗಮನಕೊಟ್ಟು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಇದರಿಂದ ತರಬೇತಿಯ ಪ್ರಯೋಜನ ಪಡೆದುಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾಧಿಸಿದರು.

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ.ಎ.ವಿ.ನುಂಕಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಯಾವುದೇ ವೃತ್ತಿಯನ್ನು ಕೀಳಾಗಿ ಕಾಣಬಾರದು. ಸಣ್ಣದಾಗಿ ಉದ್ಯಮ ಆರಂಭಿಸಿದ ಅನೇಕರು ಇಂದು ದೊಡ್ಡದಾಗಿ ಬೆಳೆದಿದ್ದಾರೆ.

ಸರ್ಕಾದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವ-ಉದ್ಯೋಗ ಮೂಲಕ ಸ್ವಾವಲಂಭಿಗಳಾಗಿ ಬದುಕುವುದನ್ನು ಕಲಿಯಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ರುಡ್‍ಸೆಟ್ ನಿರ್ದೇಶಕಿ ಶ್ರೀಮತಿ ಹೆಚ್.ಆರ್.ರಾಧಮ್ಮ, ಅಮೃತ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ವಜಾಹತ್‍ವುಲ್ಲಾ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಜಹರ್‍ವುಲ್ಲಾ, ಹೊಳಲ್ಕೆರೆ ಎ.ಪಿ.ಎಂ.ಸಿ. ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಎ.ಜಿ.ಸುರೇಂದ್ರಬಾಬು ಹಾಗೂ ಪ್ರಶಿಕ್ಷಣಾರ್ಥಿಗಳು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *