ನವದೆಹಲಿ; ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆ ಇದೆ. ಮಕ್ಕಳಿಗೆ ಪೌಷ್ಠಿಕಾಂಶ ಸಿಗಬೇಕು ಎಂಬ ಕಾರಣದಿಂದ ಪ್ರತಿದಿನ ಮಧ್ಯಾಹ್ನ ಬಿಸಿಯೂಟವನ್ನ ನೀಡಲಾಗುತ್ತದೆ. ಆದರೆ ಈಗ ಬಿಸಿಯೂಟದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಮಕ್ಕಳಲ್ಲಿ ಉಂಟಾಗುತ್ತಿರುವ ಬೊಜ್ಜಿನ ಸಮಸ್ಯೆಗೆ ಸಲಹೆಗಳನ್ನು ಕಂಡು ಹಿಡಿಯುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಮಕ್ಕಳಲ್ಲಿ ಬೊಜ್ಜು ಹೆಚ್ಚಾದ ಪರಿಣಾಮ ಬಿಸಿಯೂಟದಲ್ಲಿ ಶೇಕಡ 10ರಷ್ಟು ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಬೇಕು, ಕಡಿಮೆ ಎಣ್ಣೆಯ ಡಯೆಟ್, ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳ ಬಗ್ಗೆ ಪೌಷ್ಟಿಕ ಆಹಾರ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ಅಡುಗೆಯಲ್ಲಿ ಎಣ್ಣೆ ಕಡಿಮೆ ಬಳಸುವುದರ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿ, ಪೋಷಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ದೈಹಿಕ ಕಸರತ್ತು, ಯೋಗಾಭ್ಯಾಸವನ್ನು ಉತ್ತೇಜಿಸಬೇಕು. ಆರೋಗ್ಯಕರ ಜೀವನ ಶೈಲಿಯನ್ನು ತೂಕ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುವಂತೆ ಉತ್ತೇಜಿಸಬೇಕಿದೆ.

ಇತ್ತೀಚೆಗೆ ಪ್ರಧಾನಮಂತ್ರಿ ಮೋದಿ ಅವರು ಕೂಡ ಪರೀಕ್ಷೆ ಪೇ ಚರ್ಚಾ, ಮನ್ ಕೀ ಬಾತ್ ನಲ್ಲಿ ಬೊಜ್ಜಿನ ಅಪಾಯದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದರು. ಮಕ್ಕಳಲ್ಲೂ ಕೂಡ ಬೊಜ್ಜು ಬೆಳೆಯುವುದನ್ನು ತಡೆಯಬೇಕು ಎಂದು ಹೇಳಿದ್ದರು. ಈ ಬಗ್ಗೆ ಸೀರಿಯಸ್ ಆಗಿ ಗಮನ ಹರಿಸಿದ್ದು, ಬಳಸುವ ಎಣ್ಣೆಯಲ್ಲಿ ಶೇಕಡ 10 ರಷ್ಟು ಕಡಿಮೆ ಮಾಡಲು ಸೂಚಿಸಲಾಗಿದೆ.

