ಬೆಂಗಳೂರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರು ಮತ್ತೆ ಎಚ್ಚರಿಕೆಯ ಗಂಟೆ ಹೊಡೆದಿದ್ದಾರೆ. ಬಾಕಿ ಉಳಿಸಿಕೊಂಡಿರುವ 33 ಸಾವಿರ ಕೋಟಿ ಹಣವನ್ನು ನವೆಂಬರ್ ಒಳಗೆ ನೀಡಬೇಕು, ಇಲ್ಲವಾದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಮಗೆ ರಾಜ್ಯ ಸರ್ಕಾರದಿಂದ 33 ಸಾವಿರ ಕೋಟಿ ರೂಪಾಯಿ ಬಾಕಿ ಇದೆ. ಐದಾರು ಬಾರಿ ಸಿಎಂ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದ್ದೇವೆ. ಸರ್ಕಾರದ ಎಂಟು ಇಲಾಖೆಯಿಂದ ಒಟ್ಟು 33 ಸಾವಿರ ಕೋಟಿ ಬಾಕಿ ಇದೆ. PWD ಇಲಾಖೆಯಿಂದ ಅಲ್ಪಸ್ವಲ್ಪ ಬಿಡುಗಡೆ ಆಗ್ತಿದೆ. ಅದಾಗಿಯೂ 9 ಸಾವಿರ ಕೋಟಿ ಹಣ ಬಾಕಿ ಇದೆ. ನಮ್ಮ ಸಿಬ್ಬಂದಿಗಳಿಗೆ ದಸರಾ, ದೀಪಾವಳಿ ಉಡುಗೊರೆ ಕೊಡುವುದಕ್ಕೂ ಆಗದ ಪರಿಸ್ಥಿತಿಯಲ್ಲಿದ್ದೇವೆ. ದಸರಾ ಹಬ್ಬದ ಸಮಯದಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡಿದ್ದೇವೆ. ಈಗ ದೀಪಾವಳಿ ಹಬ್ಬ ಬಂದಾಗಲೂ ನಮ್ಮ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಓಡಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಸಹನೆಯ ಕಟ್ಟೆ ಒಡೆಯುವಂತೆ ರಾಹ್ಯ ಸರ್ಕಾರ ಮಾಡಬಾರದು. ಡಿಸೆಂಬರ್ ತನಕ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಲು ಡೆಡ್ಲೈನ್ ನೀಡಲಾಗಿದೆ. ನವೆಂಬರ್ ಒಳಗೆ ಎಲ್ಲಾ ಬಿಲ್ ಬಾಕಿ ಹಣ ಬಿಡುಗಡೆಯಾಗಿ ಪಾವತಿಯಾಗಬೇಕು. ಬಾಕಿ ಹಣ ಬಿಡುಗಡೆ ಮಾಡದಿದ್ರೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೂ ದೂರು ನೀಡಲು ತೀರ್ಮಾನ ಮಾಡಿದ್ದೇವೆ ಎಂದು ಗುತ್ತಿಗೆದಾರರ ಸಂಘ ಎಚ್ಚರಿಕೆಯನ್ನ ನೀಡಿದೆ.


