ನೇಹಾ ಹಿರೇಮಠ ಹತ್ಯೆ ಪ್ರಕರಣ | ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ : ಎಸ್‍ಯುಸಿಐ(ಸಿ) ಒತ್ತಾಯ

1 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 21 :ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯು ಅತ್ಯಂತ ಹೇಯ ಘಟನೆಯಾಗಿದ್ದು, ಇದರ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯು ಆಗ್ರಹಿಸುತ್ತದೆ.

ಇದೇ ಸಂದರ್ಭದಲ್ಲಿ, ಈ ಪ್ರಕರಣಕ್ಕೆ ಕೋಮು ಮತ್ತು ಚುನಾವಣಾ ರಾಜಕೀಯದ ಬಣ್ಣವನ್ನು ನೀಡುತ್ತಿರುವ ವಿದ್ಯಮಾನವನ್ನು ಕೂಡ ಎಸ್‍ಯುಸಿಐ(ಸಿ) ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಭಿನ್ನಮತ ಮತ್ತು ನಾಯಕತ್ವದ ಬಿಕ್ಕಟ್ಟಿನಲ್ಲಿರುವ ಬಿಜೆಪಿ ಪಕ್ಷಕ್ಕೆ ಜನರ ಮುಂದೆ ಪರಿಣಾಮಕಾರಿಯಾಗಿ ಹೇಳಿಕೊಳ್ಳುವ ವಿಷಯವೇನೂ ಇಲ್ಲದೆ ಸಪ್ಪಗಾಗಿತ್ತು.

ಇಂತಹ ಸಂದರ್ಭದಲ್ಲಿ ನಡೆದ ಈ ದುರ್ಘಟನೆಯನ್ನು ಬಿಜೆಪಿಯು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ, ಈ ವಿವಾದ ಕೋಮು ದಳ್ಳುರಿಗೆ ದಾರಿ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಸಮಾಜದಲ್ಲಿ ಒಟ್ಟಾರೆಯಾಗಿ ಪ್ರಧಾನವಾಗಿರುವ ಸ್ವಕೇಂದ್ರಿತ ಮನಸ್ಸು, ಹಿಂಸೆಯ ವೈಭವೀಕರಣ , ಪುರುಷಾಧಿಕಾರದ ಅಹಂ, ನೈತಿಕ ಅಧಃಪತನಗಳಿಂದ ಇಂತಹ ದುರಂತಗಳು ಸಂಭವಿಸುತ್ತಿದ್ದು, ಘಟನೆ ನಡೆದಾಗ ಪ್ರತಿಕ್ರಯಿಸುವುದು ಮಾತ್ರವಲ್ಲದೆ, ಇವುಗಳ ನಿಯಂತ್ರಣಕ್ಕೆ ಆಳುವ ಸರ್ಕಾರಗಳು ಮತ್ತು ಸಮಾಜ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‍ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ಉಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *