ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 19 : ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಜನ-ಜಾನುವಾರುಗಳು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಡಿಗೆ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಇಂದು ಚಿತ್ರದುರ್ಗ ನಗರದ ಸುನ್ನಿ ಬಡಾ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಮಧ್ಯಾಹ್ನ 2:30ಕ್ಕೆ ಸಾಮೂಹಿಕ ನಮಾಜ್ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಾಮಿಯಾ ಮಸೀದಿಯ ಅಧ್ಯಕ್ಷರಾದ ಸಾದಿಕ್, ಕಾರ್ಯದರ್ಶಿ ಮಾಹಿಬ್ ವುಲ್ಲಾ ಹಾಗೂ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈ ಪ್ರಾರ್ಥನೆ ಜರುಗಿತು. ನಮಾಜ್ನ ನೇತೃತ್ವ ವಹಿಸಿದ್ದ ಧರ್ಮಗುರುಗಳು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ಭರ್ತಿಯಾಗಲಿ ಮತ್ತು ರೈತರ ಕಷ್ಟಗಳು ದೂರವಾಗಲಿ ಎಂದು ಅಲ್ಲಾಹನಲ್ಲಿ ಮೊರೆಹೋದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು, ಯುವಕರು ಹಾಗೂ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಾಮೂಹಿಕವಾಗಿ ದುವಾ ಮಾಡಿದರು.










