ಬೆಂಗಳೂರು: ಡಿಕೆಶಿ ಹಾಗೂ ಮುನಿರತ್ನ ನಡುವೆ ಈ ಹಿಂದೆ ಮಾತಿನ ಚಕಮಕಿಯೇ ನಡೆದಿತ್ತು. ದೊಡ್ಡ ಹೈಡ್ರಾಮವೇ ಸೃಷ್ಟಿಯಾಗಿತ್ತು. ಆದರೆ ಇದೀಗ ದಿಢೀರನೇ ಮುನಿರತ್ನ ಅವರೇ ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಅವರನ್ನು ಕಂಡ ಡಿಕೆ ಶಿವಕುಮಾರ್ ಭುಜ ತಟ್ಟಿ ಸ್ವಾಗತಿಸಿದ್ದಾರೆ. ಡಿಸಿಎಂ ಮನೆಗೆ ಹೋದ ಕಾರಣವನ್ನು ಮುನಿರತ್ನ ಅವರೇ ಬಿಚ್ಚಿಟ್ಟಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಕಾಮಗಾರಿಗಳು ನಿಂತು ಹೋಗಿವೆ. ಮತ್ತೆ ಸೇತುವೆಗಳು ಕೂಡ ನಿಂತಿವೆ. ಜಾಲಹಳ್ಳಿ ಸರ್ಕಲ್ ಬಳಿ, ಸ್ಕೂಲ್ ಗಳು, ಆಸ್ಪತ್ರೆ, ಸ್ವಿಮ್ಮಿಂಗ್ ಪೂಲ್, ಬಹಳಷ್ಟು ಕೆಲಸಗಳು ಪೆಂಡಿಂಗ್ ನಲ್ಲಿವೆ. ಮೂರು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗ್ತಾ ಇಲ್ಲ. ಹಾಗಾಗಿ ನಮಗೆ ಅರ್ಧ ಗಂಟೆ ಸಮಯ ಕೊಡಿ ಎಂದು ಅಧಿವೇಶನದಲ್ಲಿಯೇ ಕೇಳಿದ್ದೆವು. ನಾನು ಮತ್ತು ನಮ್ಮ ದಾಸರಹಳ್ಳಿ ಶಾಸಕರಾದ ಮುನಿರಾಜು ಇಬ್ಬರು ಜೊತೆಗೆ ಕೇಳಿದ್ದೆವು. ಅದಕ್ಕೆ ಇವತ್ತು ನಿನ್ನೆ ಅವರ ಪಿಎಸ್ ಕಾಲ್ ಮಾಡಿದ್ರು. ಬನ್ನಿ ಅಂದ್ರು.
ಅದರ ಪ್ರಕಾರ, ಕಾಮಗಾರಿಗಳು ಯಾವ್ದು ಯಾವ್ದು ನಿಂತಿದೆ. ಅದನ್ನ ಪಟ್ಟಿಮಾಡಿಕೊಂಡು ಇವತ್ತು ಕೊಟ್ಟಿದ್ದೇವೆ. ಆದಷ್ಟು ಬೇಗ ಕಾಮಗಾರಿಗಳನ್ನ ಪ್ರಾರಂಭ ಮಾಡುವುದಕ್ಕೆ ಸೂಚನೆ ಕೊಡುತ್ತೇವೆಂದು ಹೇಳಿದ್ದಾರೆ. ಆ ಭರವಸೆ ಮೇಲೆ ನಾನು ಕೂಡ ಕಾಯ್ತೇನೆ. ಆದಷ್ಟು ಬೇಗ ನಮ್ಮ ಕ್ಷೇತ್ರದಲ್ಲಿ ನಿಂತಿರುವಂತಹ ಕಾಮಗಾರಿಗಳು ಪೂರ್ಣ ಆಗಬೇಕು ಅನ್ನೋದು ನಮ್ಮ ಉದ್ದೇಶ. ಹಾಗಾಗಿ ಇವತ್ತು ನಾವೂ ಜೊತೆಗೆ ಬಂದು ಭೇಟಿ ಮಾಡಿದ್ದೇವೆ. ಸಮಯದ ಬಗ್ಗೆ ಏನು ಹೇಳಿಲ್ಲ. ಕಮಿಷನರ್ ನ ಕರೆಸಿ ಕೂಡಲೇ ಸೂಚನೆ ನೀಡುತ್ತೇನೆ ಎಂಬ ಭರವಸೆಯನ್ನ ನೀಡಿದ್ದಾರೆ ಎಂದಿದ್ದಾರೆ ಶಾಸಕ ಮುನಿರತ್ನ.



