ಮೊಳಕಾಲ್ಮೂರು : ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

1 Min Read

ಸುದ್ದಿಒನ್, ಮೊಳಕಾಲ್ಮೂರು, ಅಕ್ಟೋಬರ್, 27 : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮಂಜುನಾಥ (26 ವರ್ಷ) ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಚಿಕ್ಕೇರಹಳ್ಳಿ ಬಳಿ ನಡೆದಿದೆ.

ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಡಿ.ಹಿರೇಹಾಳ್ ಮಂಡಲಂನ ಹನುಮಾಪುರಂ ಗ್ರಾಮದ ನಿವಾಸಿ ಹೆಚ್ ಮಂಜುನಾಥ ಅವರು ಎರಡು ದಿನಗಳ ಹಿಂದೆ
ಧರ್ಮಸ್ಥಳಕ್ಕೆ ಹೋಗಿದ್ದು, ತನ್ನ ಹೆಂಡತಿ ಲಕ್ಷ್ಮೀ ಮತ್ತು ಮಕ್ಕಳು ಚಿಕ್ಕೇರಹಳ್ಳಿ ಗ್ರಾಮದಲ್ಲಿದ್ದ ಕಾರಣ ಅವರಿಗೆ ಪ್ರಸಾದ ತಲುಪಿಸಲು ಬರುವ ವೇಳೆ ಗುರುವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.

ಬಳ್ಳಾರಿಯಿಂದ ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ನಿಲ್ಲಿಸಿದ್ದರಿಂದ ಹಿಂಬದಿಯಲ್ಲಿ ವೇಗವಾಗಿ ಬರುತ್ತಿದ್ದ ಮೋಟಾರ್ ಸೈಕಲ್ ಸವಾರ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ, ಬಲಗಾಲಿಗೆ, ಬಲಕೈಗೆ, ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿರುತ್ತಾನೆ. ಕೂಡಲೇ  ಗಾಯಾಳು ಮಂಜುನಾಥನನ್ನು ರಾಂಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದಾಗ
ವಿಮ್ಸ್ ಆಸ್ಪತ್ರೆಯ ವೈದ್ಯರು ಹೆಚ್. ಮಂಜುನಾಥ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *