ಚಿಕ್ಕಮಗಳೂರು: ಇಲ್ಲಿನ ಪ್ರಸಿದ್ಧ ತಾಣ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿಯನ್ನ ಕಳೆದ ಎರಡು ದಿನಗಳಿಂದ ಹುಡುಕುತ್ತಲೇ ಇದ್ದಾರೆ. ಆದರೆ ಈ ಪ್ರಕರಣ ದುರಂತ ಅಂತ್ಯ ಕಂಡಿದೆ. ಬಾಲಕಿ ಶ್ರೀನಂದಾ ಅವರ ಮೃತದೇಹ ಭೀಕರ ಪ್ರಪಾತದಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆ ಸುಮಾರು 6.30ರ ಸುಮಾರಿಗೆ ಮಾಣಿಕ್ಯಧಾರದ ಬಳಿ ಬಾಲಕಿ ಶ್ರೀನಂದಾ ನಾಪತ್ತೆಯಾಗಿದ್ದಳು. ಬಾಲಕಿ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಅಂದಿನ ವಾತಾವರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.
ಮಗಳ ಆಗಮನಕ್ಕಾಗಿ ಕಾದು ಕೂತಿದ್ದ ಪೋಷಕರಿಗೆ ಇದೀಗ ಆಘಾತ ಎದುರಾಗಿದೆ. ಮಗಳು ಕಿಡ್ಯ್ನಾಪ್ ಆಗಿರಬಹುದು ಎಂಬ ಅನುಮಾನವನ್ನ ಪೋಷಕರು ವ್ಯಕ್ತಪಡಿಸಿದ್ದರು. ಈಗ ನೋಡಿದ್ರೆ ಶವವಾಗಿ ನೋಡಬೇಕಾದ ಪರಿಸ್ಥಿತಿ ಬಂದಿದೆ. ಆ ಫೋಟೋ ನೋಡಿದ ಕೂಡಲೇ ದಿಕ್ಕೆ ತೋಚದಂತೆ ಆಗಿದೆ. ಬೇಸಿಗೆ ರಜೆ ಇರುವ ಕಾರಣ ಉಡುಪಿ, ಮಂಗಳೂರು ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದರು. ಎಲ್ಲಾ ಕಡೆ ಸುತ್ತಾಡಿ ಬಳಿಕ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಮಾಣಿಕ್ಯಧಾರ ಬಳಿ ಹೋದಾಗ ಶ್ರೀನಂದಾ ನಾಪತ್ತೆಯಾಗಿದ್ದರು.

ರಜೆಗೆಂದು ಬಂದು ಈಗ ಮಗಳನ್ನ ಕಳೆದುಕೊಂಡಿರುವ ಪೋಷಕರಿಗೆ ಎಂಥ ದೊಡ್ಡ ಆಘಾತವಾಗಿದೆ ಅಲ್ವಾ. ಸುಮಾರು 1500 ಅಡಿ ಆಳದ ಕಂದಕದ ಬಳಿ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಇವತ್ತಿನ ಕಾರ್ಯಾಚರಣೆ ವೇಳೆ ಸುಮಾರು 5 ಕಿಲೋ ಮೀಟರ್ ದೂರದಲ್ಲಿ ಮೃತದೇಹವನ್ನ ಗುರುತಿಸಿದ್ದಾರೆ. ಮಗಳನ್ನ ಹೇಗಾದರೂ ಮಾಡಿ ಹುಡುಕಿಕೊಡಿ ಎಂದು ಪ್ರಾರ್ಥನೆ ಮಾಡಿದ್ದ ಪೋಷಕರಿಗೆ ಮಗಳ ಸಾವು ಶಾಕ್ ನೀಡಿದೆ.












