ಬೆಂಗಳೂರು: ಕಳೆದ ಕೆಲವು ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲು ನಾಪತ್ತೆಯಾಗಿದ್ದರು. ಆಗ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮಲ್ಲು ಅವರು ಎಲ್ಲಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹ ಕೂಡ ಕೇಳಿ ಬಂದಿತ್ತು. ಇದೀಗ ದಿಢೀರ್ ಅಂತ ಮಲ್ಲಿಕಾರ್ಜುನ್ ಪ್ರತ್ಯಕ್ಷವಾಗಿದ್ದು, ಇಷ್ಟು ವರ್ಷ ಏನ್ಮಾಡ್ತಾ ಇದ್ದೆ..? ಯಾಕೆ ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದು ಎಂಬ ಬಗ್ಗೆ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿ, ನನ್ನಿಂದ ಎಷ್ಟೋ ಜನರಿಗೆ ಅನ್ಯಾಯವಾಗಿದೆ, ತೊಂದರೆಯಾಗಿದೆ. ಅವರೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಇಂಜಿನಿಯರಿಂಗ್ ಮುಗಿಸಿ, ಅಸಿಸ್ಟೆಂಟ್ ಡೈರೆಕ್ಟರ್ ಆದ ಬಳಿಕ ದರ್ಶನ್ ಅವರ ಮ್ಯಾನೇಜರ್ ಆಗಿ ಸೇರಿಕೊಂಡೆ. ಮೊದಲ ಸಲ ಸಿನಿಮಾ ಮಾಡಿದಾಗ ಅಂದುಕೊಂಡ ರೀತಿ ಕೈ ಹಿಡಿಯಲಿಲ್ಲ. ಸಿನಿಮಾ ನಿರ್ಮಾಣ ಮಾಡಿದೆ, ಡಿಸ್ಟ್ರಿಬ್ಯೂಷನ್ ಮಾಡಿದೆ, ಹೊಟೇಲ್ ಬಿಸಿನೆಸ್ ಮಾಡಿದೆ. ಆದರೆ ಯಾವುದು ಕೈ ಹಿಡಿಯಲಿಲ್ಲ. 8 ಕೋಟಿ ಸಾಲ ಮಾಡಿದೆ. ತೀರಿಸಲು ಆಗದೆ ಸಾಯುವ ನಿರ್ಧಾರ ತೆಗೆದುಕೊಂಡಿದ್ದೆ. ಆದರೆ ಆ ಒಂದು ಮದುವೆಯಲ್ಲಿ ಸಾಯುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು.


ಕಳೆದ ವರ್ಷ ದಿನಕರ್ ತೂಗುದೀಪ ಅವರನ್ನ ಭೇಟಿ ಮಾಡಿದ್ದೆ. ದರ್ಶನ್ ಅವರನ್ನ ಭೇಟಿ ಮಾಡಬೇಕು ಎನ್ನುವಷ್ಟರಲ್ಲಿ ನಂಗೆ ಪ್ಯಾರಾಲಿಸಿಸ್ ಆಯ್ತು. ಮತ್ತೆ ಏಳು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದೆ. ಒಮ್ಮೆ ಕಷ್ಟ ಎಂದಾಗ ದರ್ಶನ್ ಸರ್ ಬಳಿ ಎಂಟು ಕೋಟಿ ಸಾಲ ಅಂತ ಹೇಳಿಲ್ಲ, ಒಂದು ಕೋಟಿ ಸಾಲ ಇದೆ ಅಂದ್ರು. ಅದನ್ನ ಅವರು ಕೊಟ್ಟಿದ್ದರು. ಒಂದು ಕೋಟಿ ಸಹಾಯ ಮಾಡಿದ್ದ ದರ್ಶನ್ ಅವರ ಬಳಿ ಮತ್ತೆ ಮತ್ತೆ ಕೇಳೋದಕ್ಕೆ ಆಗ್ಲಿಲ್ಲ ಎಂದಿದ್ದಾರೆ.
ದರ್ಶನ್ ಹಾಗೂ ಧ್ರುವ ಅವರ ಬಾಂಧವ್ಯ ಈ ಮೊದಲು ತುಂಬಾ ಚೆನ್ನಾಗಿ ಇತ್ತು. ಆದರೆ ಪ್ರೇಮಬರಹ ಮುಗಿದ ಮೇಲೆ ಮನಸ್ತಾಪವೇ ಜಾಸ್ತಿ ಆಗಿದೆ. ಅದಕ್ಕೆ ಕಾರಣ ಕೂಡ ಮಲ್ಲಿಕಾರ್ಜುನ್ ಅಂತ ಹೇಳಲಾಗಿದೆ. ಆ ಬಗ್ಗೆ ನಂಗೆ ಗೊತ್ತಿಲ್ಲ. ಪ್ರೇಮಬರಹ ಸಿನಿಮಾ ಡಿಸ್ಟ್ರಿಬ್ಯೂಷನ್ ಕೊಡಿಸಿದ್ದು ದರ್ಶನ್ ಅವರೇ ಎಂದಿದ್ದಾರೆ.

















