ಸುದ್ದಿಒನ್, ಚಿತ್ರದುರ್ಗ, ಮೇ. 11: ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಡಿ.ಸುಧಾಕರ್ ಅವರೊಂದಿಗಿನ ಹಳೆಯ ಒಡನಾಟಗಳನ್ನು ಮೆಲುಕು ಹಾಕಿದ್ದಾರೆ.
ಸುಧಾಕರ್ ಅವರು ಎಲ್ಲ ಸಮುದಾಯದವರ ಪ್ರೀತಿ ಗಳಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ ಜಾತಿ ಮತ ಬೇಧವಿಲ್ಲದೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ, ಪಕ್ಷೇತರರಾಗಿ ಗೆದ್ದಿದ್ದ ಸುಧಾಕರ್ ಅವರು ತಮ್ಮ ರಾಜಕೀಯ ಮಿತ್ರ ಡಿ.ಕೆ. ಶಿವಕುಮಾರ್ ಅವರ ಅನುಮತಿ ಪಡೆದೇ ಬಿಜೆಪಿಗೆ ಬೆಂಬಲ ನೀಡಿದ್ದರು. ತಾವು ನಂಬಿದವರಿಗೆ ಅವರು ಎಂದಿಗೂ ದ್ರೋಹ ಬಗೆದವರಲ್ಲ ಎಂದು ಚಂದ್ರಪ್ಪ ಸ್ಮರಿಸಿದರು. ಒಬ್ಬ ಅತ್ಯುತ್ತಮ ಸಂಘಟನಾಕಾರ ಮತ್ತು ಮೇರು ವ್ಯಕ್ತಿತ್ವದ ರಾಜಕಾರಣಿಯನ್ನು ಜಿಲ್ಲೆ ಕಳೆದುಕೊಂಡಿದೆ. ಅವರ ಅಗಲಿಕೆ ವೈಯಕ್ತಿಕವಾಗಿ ನನಗೂ ಮತ್ತು ಇಡೀ ಜಿಲ್ಲೆಗೆ ತುಂಬಲಾರದ ನಷ್ಟ ಎಂದು ಚಂದ್ರಪ್ಪ ಕಂಬನಿ ಮಿಡಿದರು.

ಸಂಸದ ಗೋವಿಂದ ಎಂ.ಕಾರಜೋಳ ಅವರ ಪುತ್ರನಿಗೂ ತೀವ್ರ ತರಹದ ಶ್ವಾಸಕೋಶದ ಸೋಂಕು ಉಂಟಾಗಿ ಕೋಮಾಗೆ ತೆರಳಿದ್ದರು. ಅವರನ್ನು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಶ್ವಾಸಕೋಶದ ಶಸ್ತ್ರಚಿಕಿತ್ಸ ನಂತರ ಅವರು ಆರೋಗ್ಯ ಸುಧಾರಿಸಿ ಈಗ ಚೆನ್ನಾಗಿದ್ದಾರೆ. ಸುಧಾಕರ್ ಅವರು ಕೂಡ ಆಸ್ಪತ್ರೆಯಿಂದ ಗುಣಮುಖರಾಗಿ ಮರಳುವ ವಿಶ್ವಾಸವಿತ್ತು. ಒಂದು ವೇಳೆ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುಳಿಯುತ್ತಿದ್ದರೇನೋ ಎಂಬ ಭಾವನೆ ಕಾಡುತ್ತಿದೆ. ಆದರೆ ಈ ಆಶಯ ಕಮರಿಹೋಯಿತು ಎಂದು ಡಾ.ಎಂ.ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.


















