ಸಚಿವ ಸಂತೋಷ್‍ಲಾಡ್‍ ಹುಟ್ಟುಹಬ್ಬ : ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಿಂದ ಆಪತ್ ರಕ್ಷಕ ದಿನಾಚರಣೆ

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ವಾಹನ ಚಾಲನೆ ಮಾಡುವಾಗ ಎಚ್ಚರ ತಪ್ಪಿದರೆ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುವುದುಂಟು. ಅರಿವಿನ ಆಂದೋಲನವಾಗಬೇಕೆಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.

 

ಕಾರ್ಮಿಕ ಸಚಿವ ಸಂತೋಷ್‍ಲಾಡ್‍ರವರ ಹುಟ್ಟುಹಬ್ಬದ ಅಂಗವಾಗಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಆಪತ್ ರಕ್ಷಕ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 

ಒತ್ತಡದಲ್ಲಿ ಎಲ್ಲರೂ ಬದುಕುತ್ತಿರುವುದರಿಂದ ಜೀವನಕ್ಕೆ ಬೇಕಾದ ಅಂಶಗಳನ್ನು ಮರೆಯುತ್ತಿದ್ದಾರೆ. ಅಕ್ಷರ, ಅನ್ನ, ಆರೋಗ್ಯ ಇವುಗಳು ಸೇವೆಗಾಗಿ ಹುಟ್ಟಿಕೊಂಡಿವೆ. 21 ನೇ ಶತಮಾನ ಬದಲಾಗಿರುವುದರಿಂದ ಮನುಷ್ಯನ ಜೀವನ ಶೈಲಿಯು ಬದಲಾವಣೆಗೆ ತಕ್ಕಂತೆ ಹೊಂದಿಕೊಂಡಿದೆ. ಅರಿವಿನ ಕೊರತೆಯಿರುವುದರಿಂದ ಅಪಘಾತಗಳು ದಿನನಿತ್ಯವೂ ಸಂಭವಿಸುತ್ತಿವೆ. ಕಾರ್ಮಿಕ ಸಚಿವ ಸಂತೋಷ್‍ಲಾಡ್‍ರವರು ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಮುಂದಿರುತ್ತಾರೆ. ಅವಸರದ ವೇಗ ಮುಖ್ಯವಲ್ಲವೆಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಂಡಾಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

 

ಡಾ.ಸೌಮ್ಯ ಸಂದೀಪ್ ಮಾತನಾಡಿ ಸಂತೋಷ್‍ಲಾಡ್‍ರವರ ಹುಟ್ಟುಹಬ್ಬವನ್ನು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರು ಆಪತ್ ರಕ್ಷಕ್ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಸಂತೋಷದ ಸಂಗತಿ. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದಿರಬೇಕು. ಬೇರೆಯವರಿಗೆ ಸಮಯ ಮೀಸಲಿಡುವವರು ತುಂಬಾ ವಿರಳವಾಗಿರುವ ಇಂದಿನ ಕಾಲದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆಯುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡುತ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರ ಸೇವೆ ಚಿತ್ರದುರ್ಗ ಜಿಲ್ಲೆಗೆ ಅತ್ಯವಶ್ಯಕ. ಅಪಘಾತಕ್ಕೀಡಾಗಿ ಅನಾಹುತಗಳು ಸಂಭವಿಸಿದಾಗ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರು ಕೂಡಲೆ ಸ್ಥಳಕ್ಕೆ ಹೋಗಿ ಗಾಯಗೊಂಡವರನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ ಅಮೂಲ್ಯವಾದ ಜೀವ ಉಳಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ರಸ್ತೆಯಲ್ಲಿ ತಗ್ಗು, ಗುಂಡಿಗಳಿರುವುದು ಕೂಡ ಅಪಘಾತಕ್ಕೆ ಕಾರಣವಾಗಬಹುದು. ಎಲ್ಲಿ ಕಳಪೆ ಕಾಮಗಾರಿಯಾಗುತ್ತದೋ ಅಲ್ಲಿ ಪ್ರತಿಭಟಿಸುವ ಧೈರ್ಯವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

 

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ ಮಾತನಾಡಿ ಯಾವುದೇ ಒಂದು ಟ್ರಸ್ಟ್‍ನ ಹಿಂದೆ ಅಪಾರವಾದ ಪರಿಶ್ರಮವಿರುತ್ತದೆ. ಹೆದ್ದಾರಿಗಳು ಸೇರಿದಂತೆ ಎಲ್ಲಿಯೇ ಅಪಘಾತಗಳಾದಾಗ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರ ಸೇವೆಯಿರುತ್ತದೆ. ರಕ್ತದಾನದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸಬಹುದು. ಸಾರ್ವಜನಿಕರು ಟ್ರಸ್ಟ್‍ನ ಜೊತೆ ಕೈಜೋಡಿಸುವಂತೆ ವಿನಂತಿಸಿದರು.

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಮಂಜುನಾಥಸ್ವಾಮಿ ಮಾತನಾಡಿ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸನ್ಮಾನಿಸಿ ಬೆನ್ನು ತಟ್ಟುವ ಕೆಲಸ ಮಾಡುತ್ತಿದೆ. ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಸಚಿವ ಸಂತೋಷ್‍ಲಾಡ್‍ರವರ ಮಾನವೀಯ ಗುಣ ಅನನ್ಯವಾದುದು. ಅವರ ಹುಟ್ಟಹಬ್ಬವನ್ನು ರಾಜ್ಯದ 20 ಜಿಲ್ಲೆಗಳಲ್ಲಿ ಆಪತ್ ರಕ್ಷಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸಂಘಟನೆ ಒಬ್ಬರಿಂದ ಆಗುವುದಲ್ಲ. ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

 

ದೃಶ್ಯ ಮಾಧ್ಯಮ ವರದಿಗಾರ ಸಿದ್ದರಾಜು ಮಾತನಾಡುತ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಘಾತಗಳಾದಾಗ ಅಮೂಲ್ಯವಾದ ಜೀವ ಉಳಿಸುವ ನಿಟ್ಟಿನಲ್ಲಿ ಇವರ ಸೇವೆ ದೊಡ್ಡದು. ರಸ್ತೆಯಲ್ಲಿ ವಾಹನಗಳನ್ನು ಅತಿ ಜಾಗರೂಕವಾಗಿ ಚಾಲನೆ ಮಾಡುವುದರಿಂದ ಅಪಘಾತಗಳನ್ನು ಕಡಿಮೆ ಮಾಡಬಹುದು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಅಪಘಾತಗಳಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ರಾಜ್ಯಾಧ್ಯಕ್ಷ ಡಿ.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದ 20 ಜಿಲ್ಲೆಗಳಲ್ಲಿ ಆಪತ್ ರಕ್ಷಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತುರ್ತು ಪರಿಸ್ಥಿತಿ, ಕಷ್ಟದಲ್ಲಿರುವವರ ಜೀವ ಉಳಿಸುವಲ್ಲಿ ಸಚಿವ ಸಂತೋಷ್‍ಲಾಡ್‍ರವರು ನೆರವಿಗೆ ನಿಲ್ಲುತ್ತಾರೆ. ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ಗೆ ಅವರೆ ಬೆನ್ನುಲುಬು ಎಂದು ಹೇಳಿದರು.

 

ಅಹೋಬಲ ಟಿ.ವಿ.ಎಸ್.ಶೋರೂಂನ ಅರುಣ್‍ಕುಮಾರ್ ವೇದಿಕೆಯಲ್ಲಿದ್ದರು. ವಿವಿಧ ರಂಗಗಳಲ್ಲಿ ಸಾಧನೆಗೈದಿರುವ 25 ಮಂದಿಯನ್ನು ಸನ್ಮಾನಿಸಲಾಯಿತು.

Share This Article
Enable Notifications OK No thanks