ಬೆಂಗಳೂರು: ಇಂದಿನಿಂದ ತುಪ್ಪದ ಬೆಲೆ ಒಂದೇ ಸಲಕ್ಕೆ 90 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಕೆಎಂಎಫ್ ಶಾಕ್ ನೀಡಿದೆ. ಈಗಾಗಲೇ ಹಲವು ಬಾರಿ ಹಾಲಿನ ದರವು ಏರಿಕೆಯಾಗಿದೆ. ಈಗ ಮತ್ತೆ ಹಾಲಿನ ದರ ಏರಿಕೆಯಾಗುವ ಎಲ್ಲಾ ಸೂಚನೆ ಸಿಕ್ಕಿದೆ. ಬಮೂಲ್ ಅಧ್ಯಕ್ಷರಾಗಿರುವ ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಪರೋಕ್ಷವಾಗಿ ಮಾತನಾಡಿದ ಡಿಕೆ ಸುರೇಶ್ ಅವರು, ನಮ್ಮ ರಾಜ್ಯದಲ್ಲಿ ಮಾತ್ರ ಕಡಿಮೆ ಬೆಲೆ ಇದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವೂ ಮಂಡಳಿಗೆ ಮನವಿ ಸಲ್ಲಿಸಿದ್ದೇವೆ. ಇಷ್ಟು ಅಂತ ದರದ ಬಗ್ಗೆ ಹೇಳಿಲ್ಲ. ಅರ್ಧ ಲೀಟರ್ ಮಾರಿದರೆ ನಷ್ಟವಾಗುತ್ತದೆ. ಒಂದು ಲೀಟರ್ ಹಾಲು ಮಾರಿದರೆ ಲಾಭ ಆಗುತ್ತದೆ ಎಂದು ಹೇಳಿದರು. ತುಪ್ಪ ಇವತ್ತು ದರ ಏರಿಕೆ ಮಾಡಲಾಗಿದೆ. ಬೇರೆ ಕಂಪನಿಯ ಹಾಲು ಆನ್ಲೈನ್ ಮಾರ್ಕೆಟಿಂಗ್ ಜಾಸ್ತಿ ಆಗಿದ್ದು, ನಾವೂ ರೈತರಿಗೆ ಹಾಲು ಕೊಟ್ಟ ಕೂಡಲೇ ಹಣ ಕೊಡಬೇಕು.
ಬೇರೆ ರಾಜ್ಯಗಳು ಹೆಚ್ಚು ಹಣ ಬಾಕಿ ಉಳಿಸಿಕೊಂಡಿಲ್ಲ ಅನ್ಸುತ್ತೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು ಈಗ ನಾವೂ ತುಪ್ಪಕ್ಕೆ ನಿಗದಿ ಮಾಡಿರುವ ಮಾರುಕಟ್ಟೆಗಿಂತ ಕಡಿಮೆ ಇದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಒಕ್ಕೂಟಗಳ ಮನವಿ ಮೇರೆಗೆ ತುಪ್ಪದ ದರ ಜಾಸ್ತಿ ಮಾಡಲಾಗಿದೆ. ಹಾಲಲ್ಲೂ ಕೆಲವು ಕಡೆ ನಮಗೆ ನಷ್ಟವಾಗುತ್ತಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕಿದೆ. ನಮಗೆ ಹಾಲು ಉತ್ಪಾದಕರು ಹಾಗೂ ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

