ಧಾರವಾಡ: ಆತ್ಮಹತ್ಯೆ ಅನ್ನೋದು ಮಹಾ ಪಾಪ ಅಂತ ವೈದ್ಯರು ಹೇಳ್ತಾರೆ. ಮಾನಸಿಕವಾಗಿ ಕುಗ್ಗಿದ್ದರೆ ಧೈರ್ಯ ಹೇಳುವ ಕೆಲಸವನ್ನು ಮಾನಸಿಕ ವೈದ್ಯರು ಮಾಡ್ತಾರೆ. ಆದರೆ ಮಾನಸಿಕ ಆರೋಗ್ಯ ತಜ್ಞೆಯಾಗಬೇಕಾದವರೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ರೆ ಏನ್ ಹೇಳೋದು. ಅಂಥದ್ದೊಂದು ಘಟನೆ ಧಾರವಾಡದ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಕೇಂದ್ರದಲ್ಲಿ ನಡೆದಿದೆ.
ಡಾ.ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡವರು. ಶಿವಮೊಗ್ಗ ಮೂಲದ ರಂಗಪ್ಪ, ಡಾ.ರೇಖಾ ಅವರ ಏಕೈಕ ಮಗಳು. ಶಿವಮೊಗ್ಗದಲ್ಲಿಯೇ ಎಂಬಿಬಿಎಸ್ ಮುಗಿಸಿ, ಡಿಮ್ಹಾನ್ಸ್ ನಲ್ಲಿ ಸ್ನಾತಕೋತ್ತರ ಪಡೆಯಲು ಬಂದಿದ್ದರು. ಡಿಮ್ಹಾನ್ಸ್ ಎದುರು ಇರುವ ಕ್ವಾರ್ಟರ್ಸ್ ನಲ್ಲಿ ಪ್ರಜ್ಞಾಗೆ ಕೊಠಡಿ ಕೊಡಲಾಗಿತ್ತು. ಅವರ ಜೊತೆಗೆ ಒಬ್ಬ ಪಿಜಿ ವಿದ್ಯಾರ್ಥಿನಿ, ಇನ್ನೊಬ್ಬರು ಡಾಕ್ಟರ್ ಕೂಡ ಇದ್ದರು. ಮಗಳನ್ನು ನೋಡಲು ತಂದೆ ತಾಯಿ ಧಾರವಾಡಕ್ಕೆ ಬಂದಿದ್ದರು. ಮಗಳ ಸೌಕರ್ಯ ವಿಚಾರಿಸಿ, ಎಲ್ಲವೂ ಓಕೆನಾ ಎಂದು ಕೇಳಿ ಧಾರವಾಡದಿಂದ ಶಿವಮೊಗ್ಗಕ್ಕೆ ನಿನ್ನೆ ರಾತ್ರಿಯಷ್ಟೇ ಹಿಂತಿರುಗಿದ್ದರು. ಮಗಳ ಮುಖ ನೋಡೋದು, ಮಾತಾಡೋದು ಇದೇ ಕೊನೆ ಬಾರಿ ಅಂತ ಸಣ್ಣ ಕಲ್ಪನೆಯೂ ಆ ತಂದೆ ತಾಯಿಗೆ ಇರಲಿಲ್ಲ. ಆದರೆ ಮನೆಗೆ ಹೋದಾಗ ಮಗಳ ಸಾವಿನ ಕೆಟ್ಟ ಸುದ್ದಿ ಆ ಪೋಷಕರ ಕಿವಿಗೆ ಬಿದ್ದಿದೆ. ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಜ್ಞಾ ಅವರ ತಾಯಿ ರೇಖಾ ಈ ಬಗ್ಗೆ ಮಾತನ್ನಾಡಿದ್ದು, ಆಕೆಗೆ ಇಲ್ಲಿಗೆ ಬರಲು ಬೇಸರವಾಗಿತ್ತು. ಆರಂಭದಲ್ಲಿ ಆಸಕ್ತಿ ತೋರಿಸಿದಳು. ಎಲ್ಲರೂ ಬರುವುದಕ್ಕೂ ಮುನ್ನವೇ ಬಂದು ಸೇರಿದಳು. ಆದರೆ ದಿನ ಕಳೆದಂತೆ ಅದರ ಮೇಲೆ ಆಸಕ್ತಿ ಕಡಿಮೆಯಾಗಿತ್ತು. ನಾನು ಕೌನ್ಸೆಲಿಂಗ್ ಮಾಡಿ ಬುದ್ದಿ ಹೇಳಿದ್ದೆ. ಆದರೂ ದುಡಿಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಬೇಸರ ಮಾಡಿಕೊಂಡರು.




