ಮಣಿಪುರ ಗಲಭೆ: ಚಿತ್ರದುರ್ಗದಲ್ಲಿ ಸಿಪಿಐನಿಂದ ಪ್ರತಿಭಟನೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸಿದ್ದಿಒನ್, ಚಿತ್ರದುರ್ಗ, (ಜು.26) : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಲ್ಲಿನ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿ ನರೇಂದ್ರಮೋದಿ ಇವರುಗಳು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮೂರು ತಿಂಗಳಿನಿಂದಲೂ ಮಣಿಪುರದಲ್ಲಿ ಹಿಂಸೆ, ಕೊಲೆ, ಸುಲಿಗೆ, ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ಮಾಡಿರುವುದು ಅಲ್ಲಿನ ಘೋರತನಕ್ಕೆ ಸಾಕ್ಷಿಯಾಗಿದೆ. ಇಷ್ಟಾದರು ಮಣಿಪುರ ಮುಖ್ಯಮಂತ್ರಿ, ಪ್ರಧಾನಿ ಮೋದಿ ಅಲ್ಲಿನ ಜನಾಂಗೀಯ ಘರ್ಷಣೆಯನ್ನು ನಿಯಂತ್ರಿಸುವಲ್ಲಿ ಅಸಹಾಯಕರಾಗಿರುವುದು ನೋವಿನ ಸಂಗತಿ ಎಂದು ಪ್ರತಿಭಟನಾಕಾರರು ಧಿಕ್ಕಾರಗಳನ್ನು ಕೂಗಿದರು.

ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಕೂಡಲೆ ವಶಪಡಿಸಿಕೊಳ್ಳಬೇಕು. ಅರಣ್ಯದಲ್ಲಿ ಅಕ್ರಮವಾಗಿ ಬೆಳೆಯುತ್ತಿರುವ ಗಸಗಸೆ ಕೃಷಿಯನ್ನು ತಡೆಯಬೇಕು. ಅಕ್ರಮ ವಲಸೆ ತಡೆಯಲು ಸೂಕ್ತ ಬಂದೋಬಸ್ತ್ ಒದಗಿಸಬೇಕು.

ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಅಲ್ಲಿನ ಜನತೆಗೆ ಅಗತ್ಯ ಆಹಾರ ಪದಾರ್ಥ ಮತ್ತು ಔಷಧಿಗಳನ್ನು ಪೂರೈಸಿ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅದಾನಿ ಮತ್ತಿತರೆ ಕಾರ್ಪೊರೇಟ್ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಅರವತ್ತೈದು ಸಾವಿರ ಎಕರೆ ಅರಣ್ಯ ಭೂಮಿ ನೀಡುವ ಪ್ರಸ್ತಾಪವನ್ನು ಅಲ್ಲಿನ ಸರ್ಕಾರ ಕೈಬಿಡಬೇಕು.

ಎನ್.ಎಫ್.ಐ.ಡಬ್ಲ್ಯೂ. ನಾಯಕಿಯರ ಮೇಲೆ ದಾಖಲಿಸಿರುವ ಎಫ್.ಐ.ಆರ್.ನ್ನು ಕೂಡಲೆ ರದ್ದುಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿ.ಪಿ.ಐ.ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ತಾಲ್ಲೂಕು ಕಾರ್ಯದರ್ಶಿ ಕಾಂ.ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ಕಾಂ.ಈ.ಸತ್ಯಕೀರ್ತಿ, ಮುಖಂಡರುಗಳಾದ ಕಾಂ.ಬಸವರಾಜಪ್ಪ ಬಿ. ಕಾಂ.ರಾಜಪ್ಪ, ಕಾಂ.ತಿಪ್ಪೇಸ್ವಾಮಿ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ರವಿಕುಮಾರ್, ಕಾಂ.ಸಾವಿತ್ರಮ್ಮ, ಕಾಂ.ಆಶಾರಾಣಿ, ಕಾಂ.ಭಾಗ್ಯಮ್ಮ, ಕಾಂ. ವಿನೋಧಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *