ಮಂಗಳೂರು; ಕಳೆದ ಕೆಲವು ದಿನಗಳಿಂದ ಬಂಟ್ವಾಳದ ರಹಿಮಾನ್ ಕೊಲೆ ಕೇಸ್ ನಿಂದಾಗಿ ಮಂಗಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗಲಾಟೆಯೂ ಜೋರಾಗಿತ್ತು. ಇದೀಗ ಇಂದು ಕೊಲೆಯಾದ ಬೆನ್ನಲ್ಲೇ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದು, ಸಭೆಯಲ್ಲಿ ಜೋರು ಗಲಾಟೆಯಾಗಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರೆಲ್ಲ ಸೇರಿ ಇಂದು ಶಾದಿ ಮಹಲ್ ನಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಸಭೆಯನ್ನ ಮುಂದೂಡುವ ವಿಚಾರಕ್ಕೆ ಗಲಾಟೆಗಳು ನಡೆದಿವೆ ಎನ್ನಲಾಗಿದೆ.
ಈ ಸಭೆಯೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ನೇತೃತ್ವದಲ್ಲಿ ನಡೆಯುತ್ತಿತ್ತು. ಇದೇ ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕೆಂಬ ಚರ್ಚೆಗಳು ಆಗ್ತಾ ಇತ್ತಂತೆ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ರಾಜೀನಾಮೆಗೆ ಒಪ್ಪಿಲ್ಲ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಭೆಯನ್ನ ಮುಂದೂಡಲಾಗಿದೆ ಎನ್ನಲಾಗಿದೆ. ಇದನ್ನ ಸಭೆಯಲ್ಲಿದ್ದ ಸದಸ್ಯರು ವಿರೋಧಿಸಿದ್ದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಗಿದೆ. ಗಲಾಟೆ ಜೋರಾಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಜೋರು ಗಲಾಟೆಯೇ ಶುರುವಾಗಿತ್ತು. ಈ ಮೂಲಕ ಕಾಂಗ್ರೆಸ್ ಮುಸ್ಲಿಮರ ಸಭೆ ರಣಾರಂಗವಾಗಿದೆ.
ಬಂಟ್ವಾಳದ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಮೇ 27ರಂದು ಟೆಂಪೋ ಚಾಲಕ ಅಬ್ದುಲ್ ರಹೀಂ ಹತ್ಯೆ ನಡೆದಿತ್ತು. ನಿಸಾರ್ ಎಂಬುವವರು ನೀಡಿದ ಹೇಳಿಕೆಯ ಮೇಲೆ ಈಗಾಗಲೇ 15 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಕೇಸ್ ಗೆ ಸಂಬಂಧಿಸಿದಂತೆ ಐದು ತಂಡಗಳು ತನಿಖೆ ನಡೆಸುತ್ತಿವೆ.

