ಮಂಡ್ಯ; ಗಂಗಾ ಆರತಿಯಂತೆಯೇ ಕಾವೇರಿ ಆರತಿ ಮಾಡಬೇಕು ಎಂಬುದು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಸೆಯಾಗಿತ್ತು. ಅದರ ಜೊತೆಗೆ ಅಮ್ಯೂಸ್ಮೆಂಟ್ ಪಾರ್ಕ್ ಮಾಡುವ ಯೋಜನೆ ಕೂಡ ಡಿಕೆ ಶಿವಕುಮಾರ್ ಹಾಕಿಕೊಂಡಿದ್ದರು. ಇದೀಗ ಅದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಡ್ಯದ ರೈತರು ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದು, ಯಾವುದೇ ಕಾರಣಕ್ಕೂಯೋಜನೆ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಈ ವಿವಾದ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅಂಗಳವನ್ನ ತಲುಪಿದೆ.
ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಸಚಿವರ ಸಭೆಯನ್ನ ಕರೆಯಲಾಗಿತ್ತು. ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ರೈತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಭೆಯಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ವಿರೋಧ ವ್ಯಕ್ತವಾಗಿದ್ದು, ರೈತರು ಅಗತ್ಯವಿರುವ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ.
ಅಷ್ಟೇ ಅಲ್ಲ ಕಾವೇರಿ ಆರತಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿರುವ ರೈತರಿ, ನಿಮ್ಮದು ಹಠವಾದರೆ ನಮ್ಮದೂ ಹಠವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ, ಮದ್ದೂರು ಭಾಗಗಳಲ್ಲಿರುವ ಕೆರೆಗಳನ್ನ ತುಂಬಿಸುವ ಕೆಲಸ ಜನಪ್ರತಿನಿಧಿಗಳ ಆದ್ಯತೆಯಾಗಬೇಕು. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಪೈಕಿ ಹಲವಾರು ಪಾಳು ಬಿದ್ದಿವೆ. ಕೆಲ ಕಟ್ಟಡಗಳ ಸೀಲಿಂಗ್ ಕಳಚಿ ಬೀಳುವ ಪರಿಸ್ಥಿತಿ ಇದೆ. ಇದನ್ನೆಲ್ಲಾ ಯಾವಾಗ ನೋಡ್ತೀರಿ..? ಕಾವೇರಿ ಆರತಿ ಬೇಕೆಂದು ರೈತರು ಯಾರಾದ್ರೂ ಬಂದು ಕೇಳಿದ್ದಾರೆಯೇ..? ಮೊದಲು ಸರ್ಕಾರಿ ಶಾಲೆಗಳನ್ನ ಸರಿಪಡಿಸಿ ಎಂದು ರೈತರೆಲ್ಲ ಸೇರಿ ಚೆಲುವರಾಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


