ಬೆಂಗಳೂರು: ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಸಿಎಂ ಆಗಬೇಕಾಗಿತ್ತು ಎಂಬ ಆಸೆಯ ಬಗ್ಗೆ ಹೇಳಿದ್ದರು. ಆ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ತಂದೆಯವರು ಸಿಎಂ ಆಗುವ ಆಸೆಯ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಮೊದಲು ಫುಲ್ ವಿಡಿಯೋ ನೋಡಿ. ಈ ವಾಟ್ಸಾಪ್ ವರ್ಷನ್ಸ್ ಗಳೇ ನಮಗೆ ಡೇಂಜರ್ ಅನ್ನಿಸೋದು. ಸಾಹೇಬ್ರು ಏನ್ ಹೇಳಿದ್ರು ನಾಲ್ಕು ನಾಲ್ಕೂವರೆ ವರ್ಷ ನಾವೆಲ್ಲರು ಸೇರಿ ದುಡಿದಿದ್ದೆವು. ಆದರೆ ಅದಾದ ಮೇಲೆ ಹೈಕಮಾಂಡ್ ಅವರು ತೀರ್ಮಾನ ಮಾಡಿ, ನಾಲ್ಕೂವರೆ ತಿಂಗಳಿದ್ದಾಗ ಎಸ್ ಎಂ ಕೃಷ್ಣ ಅವರು ಬಂದ್ರು, ಅವರಿಗೆ ಅವಕಾಶ ಸಿಕ್ತು. ಅಷ್ಟು ದಿನ ನಾವೂ ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತಾಯ್ತು ಅಂದ್ರು. ಅದಾದ ಮೇಲೆ ಏನ್ ಹೇಳ್ತಾರೆ. ಅದಕ್ಕೆ ಯಾವುದೇ ರಿಗ್ರೇಟ್ ಇಲ್ಲ ಅಂದ್ರು. ಇವತ್ತು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಪಕ್ಷ ಎಲ್ಲವನ್ನು ಕೊಟ್ಟಿದೆ ಎಂದಿದ್ದಾರೆ. ಆದರೆ ನೀವೂ ಹಿಂದಿನ ಎರಡ್ ನಿಮಿಷ ಮುಂದಿನ ಎರಡ್ ನಿಮಿಷ ನೋಡ್ಬೇಕು ಅಲ್ವಾ. ಬರೀ ಎರಡು ಸೆಕೆಂಡ್ ನೋಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಲ್ಲರ ಆಶೀರ್ವಾದದಿಂದ ಸುಭಾಶ್ ಚಂದ್ರ ಬೋಸ್, ಗಾಂಧೀಜಿ ಅವರಿದ್ದ ಸ್ಥಾನದಲ್ಲಿದ್ದಾರೆ. ಹೈಕಮಾಂಡ್ ಜೊತೆಗೆ ಚೆನ್ನಾಗಿದ್ದಾರೆ. ಅವರು ಏನೇ ತೀರ್ಮಾನ ತೆಗೆದುಕೊಂಡರು ಅದರ ಮೇಲೆ ಹೋಗುತ್ತಾರೆ. ಕಳೆದ ಚುನಾವಣೆಯಲ್ಲಿ, ಅಧಿಕಾರ ಇರಲಿ, ಬಿಡಲಿ ನಾನು ಪಕ್ಷದ ಕೆಲಸ ಮಾಡಿಯೇ ಮಾಡ್ತೀನಿ ಅಂತ ಹೇಳಿದ್ದಾರೆ ಎಂದು ತಂದೆ ಬಗ್ಗೆ ಹೇಳಿದ್ದಾರೆ.

