ಚಿತ್ರದುರ್ಗ, ಏ, 07 : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಏಜೆಂಟರಾಗಿ ಶಾಖಾ ಹಾಗೂ ಖಾಸಮಠಗಳ ಸಂಪರ್ಕ ಮತ್ತು ಅವುಗಳ ಕೋರ್ಟ್ ಕೆಲಸಗಳನ್ನು ನಿರ್ವಹಿಸಿದ ಹಾಗೂ ಚಿತ್ರದುರ್ಗದ ಶ್ರೀ ಜಯದೇವ ವಿದ್ಯಾರ್ಥಿನಿಲಯದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಎಸ್. ಮಲ್ಲಯ್ಯನವರು ಮಠದಕುರುಬರಹಟ್ಟಿಯ ಅವರ ನಿವಾಸದಲ್ಲಿ ಭಾನುವಾರ ರಾತ್ರಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಜಯದೇವ ಹಾಸ್ಟೆಲ್ ಮೆನೇಜರ್ ಅಗಿ ಸುಮಾರು 30-40 ವರ್ಷಗಳು, ಕಾಲ ಸೇವೆ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಅವರು ‘ಮ್ಯಾನೇಜರ್ ಮಲ್ಲಯ್ಯ’ ಎಂದೇ ಹೆಸರಾಗಿದ್ದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮೃತರ ಅಂತಿಮ ದರ್ಶನ ಪಡೆದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವಬಸವಸ್ವಾಮಿಗಳು, ಶ್ರೀ ಮರುಳಸಿದ್ದ ಸ್ವಾಮಿಗಳು ಶೆಟ್ಟರಮಠ ಅಥಣಿ, ಶ್ರೀ ಗುರುಲಿಂಗ ಸ್ವಾಮಿಗಳು, ಅಕ್ಕಿಮಠ, ಅಗಡಿ, ಎರೆಬೂದಾಳಿನ ಶ್ರೀ ಪ್ರಭುಸ್ವಾಮಿಗಳು ಸೇರಿದಂತೆ ಅವರೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ನಾಡಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚಿತ್ರದುರ್ಗ ನಗರದ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.




