ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ.24 : ದುರ್ಗದ ಜನರ ಹಾಗೂ ಸಮುದಾಯದ ಒತ್ತಾಸೆಯಂತೆ ಚಿತ್ರದುರ್ಗದಲ್ಲಿ ಸರ್ಕಾರದವತಿಯಿಂದ ರಾಜಾ ವೀರ ಮದಕರಿ ನಾಯಕರ ಥೀಮ್ ಪಾರ್ಕ್ ಮಾಡಬೇಕು ಎಂದು ಮಹರ್ಷಿ ವಾಲ್ಮಿಕಿ ಗುರುಪೀಠದ ಶ್ರೀ ವಾಲ್ಮಿಕಿ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಈ ಕುರಿತು ಮನವಿ ಸಲ್ಲಿಸಿರುವ ಸ್ವಾಮೀಜಿ, ರಾಜಾ ವೀರ ಮದಕರಿ ನಾಯಕರ ಥೀಮ್ ಪಾರ್ಕ ಮಾಡುತ್ತೇವೆಂದು ಕೆಂದ್ರ ಸರ್ಕಾರ ಘೋಷಣೆ ಮಾಡಿತ್ತು ಆದರೆ ಇದುವರೆಗೂ ಅದು ಈಡೇರಿಲ್ಲ ಆದ್ದರಿಂದ ತಮ್ಮ ಸರ್ಕಾರದ ಅವಧಿಯಲ್ಲಿ ಥೀಮ್ ಪಾರ್ಕ ಮಾಡಬೇಕು. ಚಿತ್ರದುರ್ಗವನ್ನು ಆಳಿದ ರಾಜಾ ಮತ್ತಿ ತಿಮ್ಮಣ್ಣನಾಯಕರಿಂದ ಕೊನೆ ರಾಜಾವೀರ ಮದಕರಿನಾಯಕರವರೆಗೆ ಈ ನಾಡಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಇವರ ಕಾಲದಲ್ಲಿ ಈ ನಾಡು ಸುವರ್ಣಯುಗವಾಗಿದೆ ಎಂದು ಅನೇಕ ಇತಿಹಾಸಗಾರರು ತಿಳಿಸಿದ್ದಾರೆ ಹಾಗಾಗಿ ಈ ನಾಡಿಗೆ ತನ್ನದೇ ಆದ ಸಂಸ್ಕೃತಿ ಗೌರವವಿದೆ. ಅದನ್ನು ಉಳಿಸಲು ಮುಂದಿನ ಪೀಳಿಗೆಗೆ ಪರಿಚಹಿಸಲು ಸರ್ಕಾರದ ವತಿಯಿಂದ ದುರ್ಗೋತ್ತೋವ ಕಾರ್ಯಕ್ರಮ ಆಚರಿಸಬೇಕು. ಜಿಲ್ಲೆಯಲ್ಲಿ ಅತಿ ಹೆಚ್ಚು ಬುಡಕಟ್ಟು ಸಮುದಾಯವನ್ನು ಹೊಂದಿದ್ದು ಚಿತ್ರದುರ್ಗದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿದೆ ಆದ್ದರಿಂದ ತಾವು ಸರ್ಕಾರದ ಗಮನಕ್ಕೆ ತಂದು ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂದು ಸಮುದಾಯದ ಒತ್ತಾಸೆಯಾಗಿದೆ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರುಗಳಾದ ಎಂ.ಚಂದ್ರಪ್ಪ, ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಕೆ.ಸಿ.ವಿರೇಂದ್ರ ಪಪ್ಪಿ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ನಗರಸಭಾ ಸದಸ್ಯರಾದ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

