ಇಡೀ ಲೋಕವನ್ನೇ ಗೆದ್ದಿರುವ ಮಹಾಗುರು “ಬುದ್ಧ” : ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷೆ ಅಮ್ಮ ಮಹದೇವಮ್ಮ

1 Min Read

ಸುದ್ದಿಒನ್, ಚಿತ್ರದುರ್ಗ, (ಜು.03): ನಮ್ಮ ನಡೆ-ನುಡಿಗಳನ್ನು ಶುದ್ಧಿಕರಿಸಿಕೊಂಡು ಒಳ್ಳೆಯವರಾಗಿ ಬಾಳಲು ಸರಿಯಾದ ದಾರಿ ತೋರಿಸುವವರೇ ಗುರುಗಳು. ಗುರುವಿನ ಪ್ರತಿ ಮಾತು ಒಳಿತನ್ನು ಮಾಡುವಂತೆ ಪ್ರೇರೇಪಿಸಬೇಕು. ಲೋಕದ ಹಿತಕ್ಕಾಗಿ ತನ್ನ ಇಡೀ ಬದುಕನ್ನೇ ಸಮರ್ಪಿಸಿಕೊಂಡ ಬುದ್ಧ ಇಡೀ ಲೋಕವನ್ನೇ ಗೆದ್ದ ಮಹಾಗುರು ಎಂದು ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಅಮ್ಮ ಮಹದೇವಮ್ಮ ಅವರು ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದಲ್ಲಿ ಸೋಮವಾರ ಗುರುಪೂರ್ಣೀಮೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ “ಬುದ್ದ ಕಟ್ಟ ಬಯಸಿದ ಸಮಾಜ’’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರತಿ ವ್ಯಕ್ತಿ ಮತ್ತು ಸಮಾಜದ ಸುಧಾರಣೆಗೆ ಬುದ್ಧನ ನೀತಿ ತತ್ವಗಳು ಅಗತ್ಯವಾಗಿವೆ. ಸತ್ಯ, ನ್ಯಾಯ, ಧರ್ಮದಿಂದ ಬಾಳುವ ಬಗೆಯನ್ನು ತಿಳಿಸಿಕೊಟ್ಟಿರುವ ಬುದ್ದನ ಚಿಂತನೆಗಳು ಈ ಕೃತಿಯಲ್ಲಿವೆ ಎಂದು ತಿಳಿಸಿದರು.

ಸಾಹಿತಿ ಯುಗಧರ್ಮ ರಾಮಣ್ಣ ಮಾತನಾಡಿ, ಗುರುಪೂರ್ಣಿಮೆಯಲ್ಲಿ ವ್ಯಾಸ ಗುರುವನ್ನು ಸ್ಮರಿಸುವಂತೆ ಈ ಲೋಕದ ಉದ್ದಾರಕ್ಕಾಗಿ ಹಗಲಿರುಳು ಶ್ರಮಿಸಿರುವ ಗುರುಗಳನ್ನೆಲ್ಲ ನೆನೆಯಬೇಕು. ಅವರುಗಳು ತೋರಿದ ದಾರಿಯಲ್ಲಿ ಸಾಗಬೇಕು. ಇಂದಿನ ಹಲವು ಸಂಕಟಗಳನ್ನೊತ್ತು ಬರುತ್ತಿರುವ ಜನತೆಗೆ ಪರಿಹಾರ ಹೇಳುವ ಶ್ರೀಮಠದ ಅಮ್ಮಮಹದೇವಮ್ಮ ಈ ಗುರುಪರಂಪರೆಯಲ್ಲಿ ಒಬ್ಬರು.

ಇಡೀ ಕರ್ನಾಟಕವನ್ನೇ ತಿರುಗಿ ಕಾರ್ಯಕ್ರಮಗಳನ್ನು ನೀಡಿರುವೆ. ಅದರೆ ಬೆಳಗಟ್ಟದಲ್ಲಿರುವ ಅಮ್ಮ ಮಹದೇವವಮ್ಮ ಅವರು ಬುದ್ದ, ಬಸವಣ್ಣ, ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಯ ತತ್ವಗಳನ್ನು ಪಾಲಿಸಿಕೊಂಡು ಬರುತ್ತಿರುವ ಮಹಾಜ್ಞಾನಿ ಎಂದರು.

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ “ಬುದ್ಧ ಕಟ್ಟ ಬಯಸಿದ ಸಮಾಜ’’ ಕೃತಿಯು ಸಾರ್ಥಕವಾಗಿ ಬದುಕವ ದಾರಿಯನ್ನು ಬುದ್ಧ ಮಹಾಗುರು ತೋರಿದ ಬಗೆಯನ್ನು ತಿಳಿಸಿರುವರು ಎಂದರು.

ಸಾಹಿತಿ ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ, ಕತ್ತಲ ಬದುಕಿಗೆ ಬೆಳಕಿನ ಹಾದಿ ತೋರುವವರೇ ಗುರು. ಅಂತಹ ಗುರುಗಳಲ್ಲಿ ಬುದ್ಧ ಮಹಾಶಯರು ಅತ್ಯಂತ ಶ್ರೇಷ್ಟರು. ಇಂದಿನ ತಲ್ಲಣ, ಆತಂಕದ ಬದುಕಿಗೆ ಶಾಂತಿ, ನೆಮ್ಮೆದಿಯ ನೆಲೆಯು ಬುದ್ದನ ತತ್ವಗಳಲ್ಲಿ ಇದೆ ಎಂದರು.

ಕಾರ್ಯಕ್ರಮದಲ್ಲಿ ನಾಗರಾಜ್ ಕಣವೆಬಿಳಚಿ, ನಾಗೇಶ್, ಜಗದೀಶ್, ಸತೀಶ್ ಇತರರು ಉಪಸ್ಥಿತರಿದ್ದರು. ಶರಣರು ಮತ್ತು ಭಕ್ತರು ಅಮ್ಮ ಮಹದೇವಮ್ಮ ಅವರಿಗೆ ಗುರುವಂದನೆ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *