ಜ್ಞಾನಪೂರ್ಣ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಶ್ರಾವಣ ಕಾರ್ಯಕ್ರಮ : ಮಕ್ಕಳು ಸಾಹಿತ್ಯ ಕೃತಿಗಳನ್ನು ರಚಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕು : ಯೋಗೀಶ್ ಸಹ್ಯಾದ್ರಿ

3 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ಮಕ್ಕಳ ಸಾಹಿತ್ಯ ಜ್ಞಾನದ ಜೊತೆಗೆ ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸುತ್ತದೆ. ಸಾಹಿತಿಗಳು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಮಕ್ಕಳ ಸಾಹಿತ್ಯದಲ್ಲಿ ನವ ಸಾಹಿತಿಗಳ ಅಗತ್ಯವಿದೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ತಾಲೂಕಿನ ಡಿ.ಎಸ್. ಹಳ್ಳಿಯ ಜ್ಞಾನಪೂರ್ಣ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಮಕ್ಕಳ ಸಾಹಿತ್ಯ ಶ್ರಾವಣ – 2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳಲ್ಲಿ ಅದಮ್ಯ ಚೈತನ್ಯ ಅಡಗಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸುವುದರಿಂದ ವಿಶ್ವ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಬಲ್ಲರು. ಮಕ್ಕಳ ಸಾಹಿತ್ಯದ ಅಭಿರುಚಿ ಸಾಮಾನ್ಯ ಜನರನ್ನು ಸಹ ತಲುಪಬೇಕು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರಣಿ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಸಹ ಚಿಂತನೆ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ರೀತಿಯ ರಾಜ್ಯ ಮತ್ತು ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಹೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು
ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಣ್ಣಪ್ಪ ಎಚ್ ಮಾತನಾಡಿ, ಸಾಹಿತ್ಯ  ಒಂದು ಭಾಷೆಯಾಗಿ ಮಾತ್ರ ಸೀಮಿತ ವಾಗಿಲ್ಲ  , ಅದು ಮನುಷ್ಯನ ಸಂಸ್ಕಾರದ ಸಂವಹನ ಮಾಧ್ಯಮ ,  ಕನ್ನಡ ಸಾಹಿತ್ಯದಲ್ಲಿ ಪಂಪ ಪೊನ್ನ ರನ್ನ ರೀತಿಯಲ್ಲಿ ಮಕ್ಕಳ ಸಾಹಿತ್ಯದಲ್ಲೂ ಪಂಜೆ ಮಂಗೇಶರಾಯರು, ಅರಗ ಲಕ್ಷ್ಮಣರಾವ್ ಮತ್ತು ಜಿ ಪಿ ರಾಜರತ್ನಂ ರಂತಹ ರತ್ನತ್ರಯರು ಇದ್ದಾರೆ. ಇವರೆಲ್ಲಾ ಬರೆದಿರುವ ಸಾಹಿತ್ಯ  ಮಕ್ಕಳ ಬೌದ್ಧಿಕ ಮಟ್ಟಕ್ಕೆ ಹತ್ತಿರವಾಗುವಂತೆ ನಾಗರಹಾವೆ ಹಾವೊಳು ಹೂವೆ , ಬಂದ ಬಂದ ಸಣ್ಣ  ತಮ್ಮಣ್ಣ , ಬಣ್ಣದ ತಗಡಿನ ತುತ್ತೂರಿ ಹೀಗೆ ಬರೆದಿದ್ದಾರೆ . ಭಾಷೆಗೆ ಎಷ್ಟೊಂದು ಶಕ್ತಿ ಇದೆ ಎಂದರೆ ರಾಜರತ್ನಂ ಹೇಳುವಂತೆ ಒಂದು ಮಗು ಮಾತು ಬಾರದಿರುವ ನಾಯಿ ಮರಿ ಜೊತೆ  ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ಎಂದು ಕೇಳಿದಾಗ ಮಗುವಿನ ಪ್ರಶ್ನೆಗೆ ನಾಯಿ ಮರಿ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ಎಂದು ಉತ್ತರಿಸುವ ಪರಿ ನೋಡಿದರೆ ಭಾಷೆಗೆ ಮೂಕ ಪ್ರಾಣಿಗಳೊಂದಿಗೂ ಮಾತನಾಡುವ ಶಕ್ತಿ ಇರುವುದು ವಿಶೇಷ.

 

ಸಾಹಿತ್ಯ ಹಿರಿಯರಿಗೆ,ಪಂಡಿತ ಪಾಮರರಿಗೆ ಮಾತ್ರವಲ್ಲ ಚಿಕ್ಕವರಿಂದಲೇ ಸಾಹಿತ್ಯದಂತಹ ಅಭಿರುಚಿಯನ್ನು ಬೆಳೆಸಬೇಕು ಏಕೆಂದರೆ ಈ ದೇಶದ ಸಂಪತ್ತು ಮಕ್ಕಳು. ಅವರಿಗಾಗಿಯೇ ಮಕ್ಕಳ ಸಾಹಿತ್ಯ ಪರಿಷತ್ ಇದೆ ಎಂದು ಇದಕ್ಕೊಂದು ಜೀವ ತುಂಬಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವಂತವರು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಅವರು ಸಾಹಿತ್ಯ ಕ್ಷೇತ್ರ‌ ಸದಾ ಚಲನಶೀಲತೆಯುಳ್ಳದ್ದು , ಇಂತಹ ಕ್ರಿಯಾಶೀಲ ಸೃಜನಶೀಲ ಅಧ್ಯಕ್ಷರು ಇರುವವರೆಗೂ ಸಾಹಿತ್ಯ ಕ್ರೇತ್ರವೂ ಚಲನಶೀಲವಾಗಿರುತ್ತದೆ  ಹಾಗಾಗಿ ಸಹ್ಯಾದ್ರಿ ಮೇಷ್ಟ್ರು  ಸೇವೆ ಸಾಹಿತ್ಯ ಕ್ಷೇತ್ರ‌ಕ್ಕೆ  ದೊರೆತಾಗ ಇನ್ನೂ ಉತ್ತುಂಗಕ್ಕೆ ಎರುತ್ತದೆ  ಎಂದು ಹೇಳಿದರು.

ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್ ಎಲ್ ವೆಂಕಟೇಶ್ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಸಾಪ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಆದ್ದರಿಂದ ನಮ್ಮ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಶಾಲಾ ಘಟಕವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ
ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಸಹಕಾರ್ಯದರ್ಶಿ ಶ್ರೀಮತಿ ಸುಹಾಸಿನಿ ವೆಂಕಟೇಶ್ ರೆಡ್ಡಿ,
ಆಡಳಿತಾಧಿಕಾರಿಗಳಾದ ಡಾ. ಸ್ವಾಮಿ ಕೆ.ಎನ್, ಜಿಲ್ಲಾ ಮ.ಸಾ.ಪ ಉಪಾಧ್ಯಕ್ಷ ಬಿ ವಿಜಯಕುಮಾರ್ ಹಾಗು  ಜಿಲ್ಲಾ ಮಸಾಪ ಪದಾಧಿಕಾರಿಗಳು ಮತ್ತು ಶಾಲಾ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *