ಸುದ್ದಿಒನ್, ಹಿರಿಯೂರು, ಜೂನ್. 27 : ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುವುದಲ್ಲದೆ, ಜೀವನವೂ ಹಾಳಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು ಎಂದು ಐಮಂಗಲ ವೃತ್ತ ನಿರೀಕ್ಷಕ ಎನ್. ಗುಡ್ಡಪ್ಪ ಹೇಳಿದರು.
ತಾಲೂಕಿನ ಹರಿಯಬ್ಬೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಅಭಿಯಾನ ಮತ್ತು ಪ್ರಭಂದ ಸ್ಪರ್ಧೆ ಕಾರ್ಯಕ್ರಮ ಕುರಿತು ಮಾತನಾಡಿದರು.
ಮಾದಕ ವಸ್ತುಗಳ ವ್ಯಾಮೋಹದಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಿರ್ದಿಷ್ಟ ಗುರಿ ಸಾಧಿಸವುದು ಕಠಿಣವಾಗುತ್ತಿದೆ. ಮನಸ್ಸಿನ ಮೇಲೆ ನಿಗ್ರಹ ಇರುವುದಿಲ್ಲ. ಚಟಕ್ಕೆ ಬಿದ್ದವರು ಮಾದಕ ವಸ್ತುಗಳನ್ನು ಖರೀದಿ ಮಾಡಬೇಕೆಂಬ ಉಮೇದಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ಭಾಗಿಯಾಗುವ ಅಪಾಯವಿರುತ್ತದೆ. ಇಂತಹ ವಸ್ತುಗಳಿಂದ ದೂರವಿದ್ದು, ಓದುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು. ಇದೇ ಪ್ರಬಂಧ ಸ್ಪರ್ಧೆಯಲ್ಲಿ ಬಿಎಂ. ದೇವಿಕಾ ಪ್ರಥಮ, ಅನುಷಾ, ದ್ವಿತೀಯ, ಸ್ವಾತಿ ತೃತೀಯ ಮತ್ತು ಸೌಂದರ್ಯ ನಾಲ್ಕನೇ ಹಾಗೂ ನವ್ಯ ಆರ್. ಮಸಿಯಮ್ಮ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪ ನಿರೀಕ್ಷಕರಾದ ಮಂಜುನಾಥ್, ಪ್ರಾಂಶುಪಾಲ ಶ್ರೀ ಕುಮಾರಯ್ಯ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.



