ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 22 : ಒಳ ಮೀಸಲಾತಿ ಜಾರಿಗಾಗಿ ಜಿಲ್ಲೆಯಲ್ಲಿ 77 ದಿನಗಳ ಕಾಲ ನಡೆದ ರಥಯಾತ್ರೆಯನ್ನು ಅಂತ್ಯಗೊಳಿಸಿ ಮೇ.24 ರಿಂದ ಮೈಸೂರಿನ ಚಾಮುಂಡಿ ಬೆಟ್ಟದಿಂದ ಆರಂಭಗೊಳ್ಳುವ ಕ್ರಾಂತಿಕಾರಿ ಪಾದಯಾತ್ರೆ ಜೂ.9 ರಂದು ಬೆಂಗಳೂರು ತಲುಪಲಿದೆ ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಜಾರಿಗೊಳಿಸುವತನಕ ಹೊಸ ನೇಮಕಾತಿ, ಬ್ಯಾಕ್ಲಾಗ್ ಹುದ್ದೆ ಹಾಗೂ ಬಡ್ತಿಯಲ್ಲಿ ಮೀಸಲಾತಿಯನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದೆವು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಕ್ಯಾಬಿನೆಟ್ನಲ್ಲಿ ಆದ ತೀರ್ಮಾನ, ಮುಖ್ಯಮಂತ್ರಿಯ ಆದೇಶವನ್ನು ಮೀರಿ ಹೊಸ ನೇಮಕಾತಿ, ಬಡ್ತಿ ಪ್ರಕ್ರಿಯೆಯನ್ನು ಮುಂದುವರೆಸಿ ಕೋಟ್ಯಾಂತರ ರೂ.ಗಳ ಅವ್ಯವಹಾರ ಎಸಗಿದ್ದಾರೆ. ಬಡ್ತಿ ನೇಮಕಾತಿ ಯದ್ದೋಪಾದಿಯಲ್ಲಿ ನಡೆಯುತ್ತಿರುವುದನ್ನು ತಡೆಹಿಡಿಯದಿದ್ದರೆ ದಲಿತರಿಗೆ ಭಾರಿ ಅನ್ಯಾಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನ ತಿನ್ನುವ ನಾಲಿಗೆಯಾದರೆ ಹೇಳಿದ ಮಾತಿನಂತೆ ನಡೆದುಕೊಳ್ಳಬೇಕು. ರಾಹುಲ್ಗಾಂಧಿ, ಪ್ರಿಯಾಂಕಗಾಂಧಿ, ಹೆಚ್.ಸಿ.ಮಹದೇವಪ್ಪನವರಿಗೆ ದಲಿತರ ಮೇಲೆ ಏಕೆ ದ್ವೇಷ ಎಂದು ಪ್ರಶ್ನಿಸಿದರು.?
ಮೈಸೂರಿನ ಚಾಮುಂಡಿ ಬೆಟ್ಟದಿಂದ ಅರೆಬೆತ್ತಲೆ ಮೆರವಣಿಗೆ, 25 ರಂದು ಮೈಸೂರು ಡಿ.ಸಿ.ಕಚೇರಿ ಎದುರು ಮೈಮೇಲೆ ಮಲ ಸುರಿದುಕೊಳ್ಳುತ್ತೇವೆ. 26 ರಂದು ಸಚಿವರ ಮುಖವಾಡಗಳನ್ನು ಧರಿಸಿ ಕೆರೆದ ಹಾರ ಹಾಕಿಕೊಳ್ಳುತ್ತೇವೆ. ಸಚಿವರುಗಳಾದ ಡಾ.ಜಿ.ಪರಮೇಶ್ವರ, ಹೆಚ್.ಸಿ.ಮಹದೇವಪ್ಪ ಇವರುಗಳು ಪ್ರತಿಕೃತಿಯನ್ನು ಕತ್ತೆಗಳ ಮೇಲೆ ಮೆರವಣಿಗೆ ಮಾಡುತ್ತೇವೆಂದು ಎಚ್ಚರಿಸಿದರು.
ನಮ್ಮದೆ ಸಮುದಾಯದ ಸಚಿವರುಗಳು ಅಸಹಾಯಕರಾಗಿ ಗೇಟ್ಕೀಪರ್ಗಳಂತೆ ವರ್ತಿಸುತ್ತಿದ್ದಾರೆ. ಕ್ರಾಂತಿಕಾರಿ ಪಾದಯಾತ್ರೆಯ ಮೊದಲನೆ ದಿನ ನಮ್ಮನ್ನು ನಾವು ದಂಡಿಸಿಕೊಳ್ಳಲು ಚಾಟಿಯಿಂದ ಹೊಡೆದುಕೊಳಂಡು ನಾವುಗಳು ಮತ ನೀಡಿ ನಿಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಕ್ಷಮೇ ಕೇಳುತ್ತೇವೆ. ಮಾದಿಗ ಸಮುದಾಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ಬಡ್ತಿ ನಿಲ್ಲಿಸಿ ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲದೆ ಹೋದಲ್ಲಿ ಕ್ರಾಂತಿಕಾರಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆಂದು ಹೇಳಿದರು.
ಬಾಳೆಕಾಯಿ ಶ್ರೀನಿವಾಸ್, ಮಹಲಿಂಗಪ್ಪ ಕುಂಚಿಗನಹಾಳ್, ಹನುಮಂತಪ್ಪದುರ್ಗಾ, ರಾಜಣ್ಣ, ಸುರೇಶ್, ಪ್ರಭುರಾಜ್ ಕೊಡ್ಲಿ, ನ್ಯಾಯವಾದಿ ಅವಿನಾಶ್, ರುದ್ರಮುನಿ ಇನ್ನು ಅನೇಕರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.




