ಹಿರಿಯೂರು : ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಲಂಬಾಣಿ ಸಮುದಾಯವು ಹೆಸರುವಾಸಿಯಾಗಿದೆ. ಈ ಸಮುದಾಯ ಜಾನಪದ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ ಎಂದು ಸಮಾಜ ಸೇವಕ ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಓಬಳಾಪುರ ಲಂಬಾಣಿ ತಾಂಡಾ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ 286ನೇ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಲಂಬಾಣಿ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯ ಮುನ್ನಡೆ ಸಾಧಿಸಿ ಅಭಿವೃದ್ಧಿ ಹೊಂದಬೇಕು ಎಂದರು.
12ನೇ ಶತಮಾನದ ಬಸವಣ್ಣನವರ ಕಾಯಕ ತತ್ವವನ್ನು ಸಂತ ಸೇವಾಲಾಲ್ ಅವರು ಪುನರುಚ್ಚರಿಸಿದ್ದಾರೆ. ಕಾಡಿನಲ್ಲಿ ಅಸಂಘಟಿತವಾಗಿ ವಾಸಿಸುತ್ತಿದ್ದ ಜನರಿಗೆ ನೆಲೆ ದೊರಕಿಸಿಕೊಡಲು ಹೋರಾಟ ಸಂಘಟಿಸಿದರು. ನಿಷ್ಠೆ ಭಕ್ತಿ ಹಾಗೂ ಶ್ರದ್ಧೆಯಿಂದ ಲಂಬಾಣಿ ಸಮಾಜವಲ್ಲದೇ ಇತರೆ ಸಮುದಾಯಗಳು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜು ನಾಯ್ಕ್, ಷಣ್ಮುಖನಾಯ್ಕ್ , ಗುಂಡು ನಾಯ್ಕ್, ಗಿರೀಶ್ ನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.















