ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 14 : ಸ್ವಾರ್ಥವೇ ಇಲ್ಲದವರು ಅಂದ್ರೆ ಒಬ್ಬರು ಹೆತ್ತಮ್ಮ, ಮತ್ತೊಬ್ಬರು ಶಿಕ್ಷಕರು. ಇವರಿಬ್ಬರು ಕೂಡ ಮಗುವಿನ ಭವಿಷ್ಯವನ್ನ ರೂಪಿಸುವವರೇ ಆಗಿರುತ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಆಗಿ ಇಂದು ನಡೆದ ಘಟನೆಯೇ ಸಾಕ್ಷಿಯಾಗಿದೆ.
ತಾಲ್ಲೂಕಿನ ಹುಣುಸೇಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಶನಿವಾರವಾಗಿದ್ದ ಕಾರಣ ಮಕ್ಕಳೆಲ್ಲರೂ ಇನ್ನೇನು ಮನೆಗೆ ಹೊರಡುವ ಧಾವಂತದಲ್ಲಿದ್ದರು. ಅಷ್ಟರಲ್ಲೇ ಒಂದೆನೇ ತರಗತಿ ಸೃಷ್ಟಿ ಎಂಬ ಮಗುವಿಗೆ ಹಾವು ಕಚ್ಚಿದೆ. ತಕ್ಷಣವೇ ಮಗು ಚೀರಾಡತೊಡಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯ ಶಿಕ್ಷಕ ಟಿ.ಎಸ್. ರವಿಶಂಕರ್ ಮಗುವನ್ನು ಸಂತೈಸಿ, ಧೈರ್ಯ ಹೇಳಿ ಹಿಂದೆ ಮುಂದೆ ಏನನ್ನೂ ಯೋಚಿಸದೇ ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ. ಕೂಡಲೇ ಬಾಯಿಯಿಂದ ವಿಷವನ್ನು ತೆಗೆಯಲು ಮುಂದಾದರು. ವಿಷವನ್ನು ತೆಗೆದು ಕೂಡಲೇ ಅವರದ್ದೇ ದ್ವಿಚಕ್ರ ವಾಹನದಲ್ಲಿ ಮಗುವನ್ನು ಮತ್ತು ಮಗುವಿನ ತಂದೆಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ.
ತಕ್ಷಣವೇ ವೈದ್ಯರ ತಂಡ ಶಿಕ್ಷಕ ಮತ್ತು ಮಗುವಿಗೆ ಚಿಕಿತ್ಸೆ ನೀಡಿದರು. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಪ್ರಾಣಾಯಾಮವಿಲ್ಲವೆಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಶಿಕ್ಷಕರು ಮತ್ತು ಮಗುವಿನ ಕುಟುಂಬದವರೆಲ್ಲಾ ದೌಡಾಯಿಸಿದರು. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬದ ಸದಸ್ಯರು ನಿರಾಳರಾಗಿದ್ದಾರೆ.
ಪುಟ್ಟ ಮಗುವಿಗೆ ಹಾವು ಕಡಿದಾಕ್ಷಣ ಆ ಶಿಕ್ಷಕ ಬೇರೆನೂ ಯೋಚನೆ ಮಾಡದೇ ಮಗುವಿನ ಪ್ರಾಣ ಉಳಿಸಿಕೊಳ್ಳಬೇಕೆಂಬ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಆಸ್ಪತ್ರೆಗೆ ಡಿಡಿಪಿಐ ಮಂಜುನಾಥ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇಬ್ಬರ ಆರೋಗ್ಯ ವಿಚಾರಿಸಿದ್ದಾರೆ.






