ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಿ : ಎ.ಎಸ್ಪಿ ಕುಮಾರಸ್ವಾಮಿ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ.02  : ಡ್ರಗ್ಸ್ ಸೇವನೆ ಮತ್ತು ಮಾರಾಟದಿಂದ ದೇಶವೇ ಹಾಳಾಗುತ್ತದೆ. ಹಾಗಾಗಿ ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಿ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಮತ್ತು ವಿಶ್ವ ಮಾದಕ ವಸ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ, ಡ್ರಗ್ಸ್ ಚಟಕ್ಕೆ ಒಮ್ಮೆ ಬಲಿಯಾದರೆ ಅದರಿಂದ ಹೊರ ಬರುವುದು ಕಷ್ಟ. ಮನೆ, ಮನಸ್ಸು, ಸಮಾಜ ಆರೋಗ್ಯ ಪೂರ್ಣವಾಗಿರಬೇಕಾದರೆ ಯುವ ಪೀಳಿಗೆ ಇಂತಹ ಚಟಗಳಿಂದ ದೂರವಿರಬೇಕು. ಮೊಬೈಲ್ ಚಟ ಡ್ರಗ್ಸ್‍ಗಿಂತಲೂ ಅಪಾಯಕಾರಿ. ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮೊಬೈಲ್‍ಗಳನ್ನು ಬಳಸಿ. ಅದನ್ನು ಬಿಟ್ಟು ದಿನವಿಡಿ ಮೊಬೈಲ್‍ನಲ್ಲಿ ಮುಳುಗುವುದು ಸರಿಯಲ್ಲ.

ಮೊಬೈಲ್ ಚಟಕ್ಕೆ ಬಲಿಯಾದವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಒಂದು ಸಾರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದರೆ ಭಾರತದಲ್ಲಿ ನೀವು ಎಲ್ಲಿಗೆ ಹೋದರು ಅಪರಾಧಿಗಳೆ. ಸರ್ಕಾರಿ ಕೆಲಸ, ಪಾಸ್‍ಪೋರ್ಟ್ ಹೀಗೆ ಯಾವುದನ್ನೆ ಪಡೆಯಲು ಪೊಲೀಸ್ ರಿಪೋರ್ಟ್ ಬೇಕಾಗುತ್ತದೆ. ಹಾಗಾಗಿ ಕೆಟ್ಟ ಕೆಲಸಗಳಿಗೆ ಕೈ ಹಾಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಶಿಕ್ಷಣವಂತರಾಗುವ ಮೂಲಕ ಒಳ್ಳೆಯ ಪ್ರಜೆಗಳಾಗಿ ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕುಮಾರಸ್ವಾಮಿ ಕರೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು 1982 ರಲ್ಲಿ ಗ್ರಾಮಾಭಿವೃದ್ದಿ ಯೋಜನೆ ಹುಟ್ಟುಹಾಕಿ ಅಂದಿನಿಂದ ಇಲ್ಲಿಯವರೆಗೂ ಗ್ರಾಮಗಳ ಏಳಿಗೆಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಜನಜಾಗೃತಿ ವೇದಿಕೆಯಡಿ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಒಂದು ಲಕ್ಷ ಮೂವತ್ತು ಸಾವಿರ ಮಂದಿಯನ್ನು ಕುಡಿತದ ಚಟದಿಂದ ಹೊರತರಲಾಗಿದೆ. ಸ್ವಾಸ್ಥ್ಯ ಸಂಕಲ್ಪ ಯೋಜನೆಯಡಿ 1800 ಶಿಬಿರಗಳನ್ನು ನಡೆಸಿ 14 ಲಕ್ಷ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೇವೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇಲ್ಲಿಗೆ ಬಂದು ಹದಿಮೂರು ವರ್ಷಗಳಾಗಿದೆ. 50 ಶಿಬಿರಗಳನ್ನು ನಡೆಸಿರುವುದರಿಂದ ಮೂರು ಸಾವಿರ ಮಂದಿಯ ಮನಃ ಪರಿವರ್ತನೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆರು ಲಕ್ಷ ನಲವತ್ತು ಸಾವಿರ ಸ್ವ-ಸಹಾಯ ಸಂಘಗಳಿವೆ. ಜಿಲ್ಲೆಯಲ್ಲಿ ಹದಿನಾರು ಶಾಲೆಗಳಿಗೆ ಗೌರವ ಶಿಕ್ಷಕರುಗಳನ್ನು ನೀಡಿದ್ದೇವೆ. ಸುಜ್ಞಾನ ನಿಧಿಯಡಿ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕೆರೆಗಳ ಹೂಳೆತ್ತುವುದು. ನಾಲ್ಕು ನೂರು ಶುದ್ದ ಗಂಗಾ ಘಟಕ, ಹದಿನೈದು ಸಾವಿರ ನಿರ್ಗತಿಕರ ಕುಟುಂಬಕ್ಕೆ ಪ್ರತಿ ತಿಂಗಳು ಮಾಶಾಸನ ನೀಡುವುದಲ್ಲದೆ ಪ್ರತಿ ವರ್ಷ ಬಡವರಿಗೆ ನೂರು ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ. ಇದೆಲ್ಲಾ ಡಿ.ವೀರೇಂದ್ರ ಹೆಗಡೆರವರ ಸಾಧನೆ ಎಂದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಹೆಚ್.ಬಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯರುಗಳಾದ ನಾಗರಾಜ್ ಸಂಗಮ್, ಶ್ರೀಮತಿ ರೂಪ ಜನಾರ್ಧನ್, ಮೊಹಮದ್ ನೂರುಲ್ಲಾ, ಕಿರಣ್‍ಶಂಕರ್, ಡಿ.ವೈ.ಎಸ್ಪಿ. ದಿನಕರ್ ಇವರುಗಳು ವೇದಿಕೆಯಲ್ಲಿದ್ದರು.

ಕೃಷಿ ಮೇಲ್ವಿಚಾರಕ ಸುರೇಶ್, ಜನಜಾಗೃತಿ ಯೋಜನಾಧಿಕಾರಿ ನಾಗರಾಜ್, ಮೇಲ್ವಿಚಾರಕ ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ರೇಣುಕ ಪ್ರಾರ್ಥಿಸಿದರು. ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *