ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ದಲಿತರ ಜನಸಂಖ್ಯೆಗನುಗುಣವಾಗಿ 2026-27 ರ ಬಜೆಟ್‍ನಲ್ಲಿ ಶೇ.24.1 ರಷ್ಟು ಅನುದಾನ ಮೀಸಲಿರಿಸಿ ಹಣ ದುರ್ಬಳಕೆ ತಡೆಯಲು ಎಸ್ಸಿಪಿ. ಟಿಎಸ್ಪಿ. ಕಾಯಿದೆ ಸೆಕ್ಷನ್ 7(ಸಿ) ರದ್ದುಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ತಮಟೆ ಬಾರಿಸುವ ಮೂಲಕ ಸರ್ಕಾರದ ಗಮನ ಸೆಳೆದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ ಮಾತನಾಡಿ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಸಿರುವ 25 ಸಾವಿರ ಕೋಟಿ ರೂ.ಗಳನ್ನು ಹಿಂತಿರುಗಿಸಬೇಕು. ಸ್ವಂತ ನಿವೇಶನವಿಲ್ಲದ ಬಡವರು ನಿವೇಶನ ಖರೀಧಿಸಲು ಐದು ಲಕ್ಷ ರೂ.ಗಳ ನೆರವು ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ವಸತಿಗೆ ಯೋಗ್ಯವಾದ ಸರ್ಕಾರಿ ಭೂಮಿ ಮಂಜೂರು ಮಾಡಬೇಕು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿ ಖರೀಧಿಸಬೇಕು. ಬಗರ್‍ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ 57 ರ ಅರ್ಜಿಗಳನ್ನು ಸೂಕ್ತವಾದ ಕಾರಣ ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡಿ ಭೂಮಿ ಇಲ್ಲದಿರುವ ಬಡವರನ್ನು ಒಕ್ಕಲೆಬ್ಬಿಸುವುದು ನಿಲ್ಲಬೇಕು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಅವರ ಜನ್ಮದಿನ ಜೂ.9 ನ್ನು ರಜಾರಹಿತ ದಿನವನ್ನಾಗಿ ಆಚರಣೆ ಮಾಡಬೇಕು. ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಕುಟುಂಬಗಳ ವಸತಿ ರಹಿತರಿಗೆ ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚಿಸಿದಂತೆ ದೇವದಾಸಿ, ವಿಧವಾ ಮಹಿಳೆಯರು, ವೃದ್ದರು ಹಾಗೂ ವಿಕಲಚೇತರಿಗೆ ನೀಡುತ್ತಿರುವ ಮಾಸಿಕ ವೇತನವನ್ನು ಐದು ಸಾವಿರ ರೂ.ಗಳಿಗೆ ಏರಿಸಬೇಕು. ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ದಿಗಾಗಿ ಅನುಷ್ಟಾನಗೊಳಿಸಲಾಗುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ ಸ್ವಾವಲಂಭಿ ಸಾರಥಿ ಯೋಜನೆ ಸಾಲ ಸೌಲಭ್ಯಗಳ ಘಟಕ ವೆಚ್ಚವನ್ನು ದ್ವಿಗುಣಗೊಳಿಸುವಂತೆ ಕೆಂಗುಂಟೆ ಜಯಪ್ಪ ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಕೆ.ಆರ್.ಶ್ರೀಧರಮೂರ್ತಿ, ಸಹ ಸಂಚಾಲಕ ಎನ್.ಪ್ರಭಾಕರ್, ಅಂಜನಮೂರ್ತಿ ಆರ್, ಗಣೇಶ, ನಾಗರಾಜ, ರಂಗಪ್ಪ, ಮಂಜಪ್ಪ, ಶ್ರೀನಿವಾಸ, ಶೇಖರಪ್ಪ, ನುಲೇನೂರಿನ ದುರುಗಮ್ಮ, ರಂಗಮ್ಮ, ಕರಿಯಮ್ಮ, ಚಿಕ್ಕಂದವಾಡಿಯ ಶಿವಮ್ಮ, ಭಾಗ್ಯಮ್ಮ, ರುದ್ರಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Enable Notifications OK No thanks