ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ಹಾಲು ಗುಣಮಟ್ಟವಾಗಿದ್ದರೆ ಒಳ್ಳೆಯ ದರ ಕೊಡಬಹುದೆಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಕಕ್ಷ ವಿದ್ಯಾಧರ ಹೇಳಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ತಿರುಮಲ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಚಿತ್ರದುರ್ಗ ವಿಭಾಗದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆ ಉದ್ಗಾಟಿಸಿ ಮಾತನಾಡಿದರು.
ಶಿವಮೊಗ್ಗ ಹಾಲು ಒಕ್ಕೂಟ ಗುಣಮಟ್ಟದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ಹಾಲಿನ ಗುಣಮಟ್ಟ ಕಾಪಾಡಿದಾಗ ಬೇಡಿಕೆ ಹೆಚ್ಚುತ್ತದೆ. ಇಲ್ಲದಿದ್ದರೆ ಪ್ರೋತ್ಸಾಹ ಧನ ಬರಲ್ಲ. ರೈತರಿಗೆ 35 ಕೋಟಿ ರೂ.ಗಳ ಸಬ್ಸಿಡಿ ಕೊಡುತ್ತಿದ್ದೇವೆ. ಹಸುಗಳಿಗೆ ಇನ್ಸುರೆನ್ಸ್, ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಪೂರೈಸುತ್ತಿದ್ದೇವೆ. ಸಹಕಾರಿ ಸಂಘಗಳ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಸಂಘಗಳ ನಿರ್ವಹಣೆ, ಏನಾದರೂ ಕುಂದುಕೊರತೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಬೈಲಾ ಪ್ರಕಾರ ಹಾಲು ಒಕ್ಕೂಟದಲ್ಲಿ ಹಣಕಾಸು ವ್ಯವಹಾರ ನಡೆಸುವಂತಿಲ್ಲ. ಹಾಗಾಗಿ ಹಸುಗಳ ಸಾಕಾಣಿಕೆಗೆ ಸಾಲ ಪಡೆಯಲು ಡಿ.ಸಿ.ಸಿ.ಬ್ಯಾಂಕನ್ನು ಸಂಪರ್ಕಿಸಿ. ನಾನು ಕೂಡ ಬೋರ್ಡ್ನಲ್ಲಿ ಈ ವಿಚಾರವನ್ನು ಚರ್ಚಿಸುತ್ತೇನೆ. ಶಿವಮೊಗ್ಗದಲ್ಲಿ ಡಿ.ಸಿ.ಸಿ. ಬ್ಯಾಂಕ್ನಿಂದ ಸಾಲ ಕೊಡುವ ವ್ಯವಸ್ಥೆಯಿದೆ ಎಂದು ತಿಳಿಸಿದರು.
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಜಿ.ಪಿ.ರೇವಣಸಿದ್ದಪ್ಪ, ಬಿ.ಆರ್.ರವಿಕುಮಾರ್, ಜಿ.ಬಿ.ಶೇಖರ್, ಬಿ.ಸಿ.ಸಂಜೀವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಶೇಖರ್, ವ್ಯವಸ್ಥಾಪಕ ನವೀನ್ಕುಮಾರ್, ಕುಮಾರಸ್ವಾಮಿ ಇವರುಗಳು ವೇದಿಕೆಯಲ್ಲಿದ್ದರು.




