ಮುಸಲ್ಮಾನ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ : ಜೆ.ಯಾದವರೆಡ್ಡಿ

4 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.30 : ಓಟಿಗಾಗಿ ಜಾತಿ ಧರ್ಮಗಳ ನಡುವೆ ಗಲಾಟೆಯಿಟ್ಟು ಸಂವಿಧಾನ ಬದಲಾವಣೆ ಮಾಡಲು ಹೊರಟಿರುವವರು ಇರುವ ಈ ಕಾಲದಲ್ಲಿ ಭಾವೈಕ್ಯತೆ ಕೋಮು ಸೌಹಾರ್ದತೆ ಸಾರುವಂತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಚಿತ್ರದುರ್ಗ ಲೋಕಸಭಾ ಮಾಜಿ ಸದಸ್ಯ ಬಿ.ಎನ್.ಚಂದ್ರಪ್ಪ ಹೇಳಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ದೇಶದ ಪ್ರಥಮ ಶಿಕ್ಷಣ ಮಂತ್ರಿ ಡಾ.ಮೌಲಾನ ಅಬು ಕಲಾಂ ಆಜಾದ್ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತ ವಿಚಾರ ಸಂಕಿರಣ ಉದ್ಗಾಟಿಸಿ ಮಾತನಾಡಿದರು.

ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಾಯಲ್ಲಿ ಹೇಳುವವರು ಜಾತಿ ಧರ್ಮಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಗಾಳಿ, ನೀರು, ಬೆಳಕು, ದೀಪಕ್ಕೆ ಯಾವ ಜಾತಿಯಿದೆ. ಸಂತ ಶ್ರೇಷ್ಠ ಭಕ್ತಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ ಬಲ್ಲಿರ ಎನ್ನುವ ಕೀರ್ತನೆಯನ್ನು ಹಾಡುವ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಕಾಂಗ್ರೆಸ್‍ನಲ್ಲಿ ಜಾತಿಯತೆ ಎನ್ನುವುದಿಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುತ್ತದೆ. ಅದೇ ಕೋಮುವಾದಿ ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಒಬ್ಬ ಮುಸ್ಲಿಂಗಾದರೂ ಸಚಿವ ಸ್ಥಾನ ನೀಡಿದ್ದರಾ ಎಂದು ಪ್ರಶ್ನಿಸಿದರು ?

ನೆಹರು, ಇಂದಿರಾ ಗಾಂಧಿ , ಮೌಲಾನ ಅಬು ಕಲಾಂ ಆಜಾದ್ ಇವರುಗಳು ಇಲ್ಲದೆ ಹೋಗಿದ್ದರೆ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಬಿಜೆಪಿಯವರು ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿದ್ದರು.

ಅಣೆಕಟ್ಟೆ, ವಿಶ್ವವಿದ್ಯಾನಿಲಯಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗಿದ್ದು, ಬಿಜೆಪಿಯವರು ಕೇವಲ ರಾಮ ಮಂದಿರ, ಕಾಶಿವಿಶ್ವನಾಥನ ಹೆಸರೇಳಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಹಿಜಾಬ್, ಹಲಾಲ್ ಕಟ್, ಜಟ್ಕಕಟ್ ವಿವಾದ ಹುಟ್ಟಿಹಾಕಿ ಕೋಮುವಾದಿ ಬಿಜೆಪಿಯವರು ಮನುಷ್ಯ ತಿನ್ನುವ ಆಹಾರ ಪದ್ದತಿಯನ್ನು ವಿರೋಧಿಸುತ್ತಿರುವುದು ಯಾವ ನ್ಯಾಯ? ಹಿಂದೂ-ಮುಸಲ್ಮಾನರು ದೇಶದಲ್ಲಿ ಶಾಂತಿಯಿಂದ ಇರಬೇಕಾಗಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಜನತೆಯಲ್ಲಿ ಮನವಿ ಮಾಡಿದರು.

ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಮಾತನಾಡಿ ವಿಜ್ಞಾನ-ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಹೊಸ ಹೊಸ ಸವಾಲುಗಳನ್ನು ಒಡ್ಡುತ್ತಿರುವ ಇಂದಿನ ದಿನಮಾನಗಳಲ್ಲಿ ಮುಸಲ್ಮಾನ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ. ಜನಸಂಖ್ಯೆಗನುಗುಣವಾಗಿ ಮುಸಲ್ಮಾನರಿಗೆ ಮೀಸಲಾತಿ ಸಿಗಬೇಕು. ಬಡತನ ಎಂಬ ಕಾರಣಕ್ಕಾಗಿ ಶಿಕ್ಷಣದಿಂದ ಹಿಂದೆ ಸರಿದರೆ ಸಮಾಜದ ಮುಖ್ಯವಾಹಿನಿಗೆ ಬರುವುದು ಕಷ್ಠವಾಗುತ್ತದೆ ಎಂದು ಹೇಳಿದರು.

ವಿಶೇಷವಾಗಿ ಮುಸಲ್ಮಾನ ಹಿರಿಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಉನ್ನತ ಶಿಕ್ಷಣ ಬಹಳ ಮುಖ್ಯ. ಸಾಚಾರ್ ಕಮಿಟಿ ವರದಿ ಪ್ರಕಾರ ಮುಸ್ಲಿಂರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗಿಂತ ಹಿಂದುಳಿದಿದ್ದಾರೆ. ಕಾನೂನು ಹೋರಾಟದ ಮೂಲಕ ಸರ್ಕಾರದಿಂದ ಸಿಗುವ ಪ್ರಾತಿನಿಧ್ಯ ಪಡೆದುಕೊಳ್ಳಬೇಕು.

ಧಾರ್ಮಿಕ ಶ್ರದ್ದೆ ಜೊತೆ ಶಿಕ್ಷಣದ ಕಡೆ ಗಮನ ಕೊಡಬೇಕು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲೀಕರಣಗೊಳ್ಳಬೇಕಾಗಿರುವುದರಿಂದ ಮುಸಲ್ಮಾನರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು. ಡಾ. ಮೌಲಾನಾ ಅಬು ಕಲಾಂ ಆಜಾದ್ ದೇಶದ ಪ್ರಥಮ ಶಿಕ್ಷಣ ಮಂತ್ರಿಯಾಗಿರುವುದು ಹೆಮ್ಮೆಯ ಸಂಗತಿ. ಮುಸಲ್ಮಾನರು ಭಾರತದ ಪ್ರಜೆಗಳು. ಎಲ್ಲಿಯೂ ಹೋಗಬೇಕಾಗಿಲ್ಲ. ಸಂವಿಧಾನದಡಿ ಜೀವಿಸುವ ಹಕ್ಕಿದೆ. ಆತಂಕಪಡುವ ಅಗತ್ಯವಿಲ್ಲ. ಸಾಮರಸ್ಯ, ಸಹಭಾಳ್ವೆ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕಿದೆ. ಜಗತ್ತಿನಲ್ಲಿರುವ 25 ಮುಸಲ್ಮಾನ್ ರಾಷ್ಟ್ರಗಳಲ್ಲಿ ಏಳೆಂಟು ದೇಶಗಳು ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿವೆ ಎಂದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಸರ್ಕಾರ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ, ಉಚಿತ ಸಮವಸ್ತ್ರ, ಬೈಸಿಕಲ್, ಪಠ್ಯಪುಸ್ತಕ ಪೂರೈಸುತ್ತಿದೆ. ಇವೆಲ್ಲವನ್ನು ಸದುಪಯೋಗಪಡಿಸಿಕೊಂಡು ಮುಸ್ಲಿಂ ಜನಾಂಗದ ಮಕ್ಕಳು ಶಿಕ್ಷಣವಂತರಾಗಬೇಕು. ಬಡತನ ಎನ್ನುವ ಕಾರಣಕ್ಕಾಗಿ ಮಕ್ಕಳ ಶಿಕ್ಷಣ ಬಿಡಿಸಿ ಕೆಲಸಕ್ಕೆ ಕಳಿಸಬಾರದು ಎಂದು ವಿನಂತಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್, ಹಲಾಲ್ ಕಟ್, ಜಟ್ಕ್ ಕಟ್ ಹೀಗೆ ಅನೇಕ ವಿವಾದಗಳನ್ನು ಹುಟ್ಟು ಹಾಕಿ ಶಾದಿಭಾಗ್ಯ ರದ್ದುಪಡಿಸಿತ್ತು. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ಭಾಗ್ಯಗಳನ್ನು ಕೊಡುವ ಭರವಸೆ ನೀಡಿದೆ. ಡಾ.ಮೌಲಾನ ಅಬು ಕಲಾಂ ಆಜಾದ್ ದೇಶದ ಪ್ರಥಮ ಶಿಕ್ಷಣ ಮಂತ್ರಿಯಾಗಿದ್ದುದು, ಹೆಗ್ಗಳಿಕೆ. ಸಾಚಾರ್ ಕಮಿಟಿ ವರದಿ ಪ್ರಕಾರ ಮುಸ್ಲಿಂರು ಶಿಕ್ಷಣದಿಂದ ತೀರ ಹಿಂದುಳಿದಿರುವುದು ಗೊತ್ತಾಗಿದೆ.

ಕೇರಳದಲ್ಲಿ ಶೇ.94-95 ರಷ್ಟು ಶಿಕ್ಷಣವಂತರಿದ್ದಾರೆ. ಆದರೆ ಅಲ್ಲಿ ವೃದ್ದಾಶ್ರಮಗಳು ಜಾಸ್ತಿಯಿವೆ. ನಮ್ಮಲ್ಲಿ ವಿದ್ಯಾವಂತರು ಕಡಿಮೆಯಿದ್ದರು ತಂದೆ-ತಾಯಿಗಳನ್ನು ಮನೆಯಲ್ಲಿಟ್ಟು ಆರೈಕೆ ಮಾಡುತ್ತಿದ್ದಾರೆ. ವಿದ್ಯಾವಂತರೆ ಹೆಚ್ಚು ಹಣ ಗಳಿಕೆಗಾಗಿ ವಯಸ್ಸಾದವರನ್ನು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳುವವರ ಸಂಖ್ಯೆ ಜಾಸ್ತಿಯಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ತಾಲ್ಲೂಕು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಿದ್ದೇಶ್ ಎಸ್. ಕಾಂಗ್ರೆಸ್ ಮುಖಂಡ ಹೆಚ್.ಆರ್.ಮಹಮದ್, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಕಾರ್ಮಿಕ ವಿಭಾಗದ ಅಧ್ಯಕ್ಷ ಚೋಟು, ಕೆ.ಯಕ್ಬಾಲ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕಾರ್ಯಾಧ್ಯಕ್ಷ ಎ.ಹೆಚ್.ಅಬ್ದುಲ್ಲಾ, ಉಪಾಧ್ಯಕ್ಷ ನಿಸಾರ್ ಅಹಮದ್ ವೇದಿಕೆಯಲ್ಲಿದ್ದರು.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಿ.ಕುಮಾರ್ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *