ಭಾರತದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಾಮಾನ್ಯ ನಂಬಿಕೆ. ಆದರೆ ಸಂವಿಧಾನವು ದೇಶದ ಎರಡು ಪ್ರಮುಖ ಹುದ್ದೆಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸಿದೆ. ಅವರು ಅಧಿಕಾರದಲ್ಲಿ ಇರುವವರೆಗೆ ಅವರನ್ನು ಪೊಲೀಸರು ಅರೆಸ್ಟ್ ಮಾಡಲಾಗುವುದಿಲ್ಲ, ನ್ಯಾಯಾಲಯಗಳು ಕೂಡ ಕ್ರಿಮಿನಲ್ ವಿಚಾರಣೆ ಆರಂಭಿಸಲು ಸಾಧ್ಯವಿಲ್ಲ.
ಈ ವಿಶೇಷ ಸೌಲಭ್ಯವನ್ನು ಪಡೆಯುವವರು ದೇಶದ ರಾಷ್ಟ್ರಪತಿ ಹಾಗೂ ರಾಜ್ಯಗಳ ರಾಜ್ಯಪಾಲರು. ಇವರಿಗೆ ಈ ರಕ್ಷಣೆಯನ್ನು ಭಾರತೀಯ ಸಂವಿಧಾನದ ಆರ್ಟಿಕಲ್ 361 ಅಡಿಯಲ್ಲಿ ನೀಡಲಾಗಿದೆ.
ಈ ನಿಯಮದ ಪ್ರಕಾರ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ತಮ್ಮ ಅಧಿಕೃತ ಕರ್ತವ್ಯಗಳಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ನ್ಯಾಯಾಲಯಗಳಿಗೆ ಉತ್ತರಿಸಬೇಕಾಗಿಲ್ಲ. ಅವರು ಅಧಿಕಾರದಲ್ಲಿರುವವರೆಗೆ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಅಥವಾ ಮುಂದುವರಿಸಲು ಅವಕಾಶವಿಲ್ಲ. ಹಾಗೆಯೇ, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸುವುದೂ ಸಾಧ್ಯವಿಲ್ಲ.

ಈ ರಕ್ಷಣೆ ನೀಡಿರುವುದಕ್ಕೆ ಪ್ರಮುಖ ಕಾರಣವೆಂದರೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳ ಗೌರವವನ್ನು ಕಾಪಾಡುವುದು. ರಾಜಕೀಯ ದ್ವೇಷದಿಂದ ಪ್ರಕರಣಗಳನ್ನು ದಾಖಲಿಸಿ, ಅರೆಸ್ಟ್ ಮಾಡುವಂತಹ ಪರಿಸ್ಥಿತಿ ಉಂಟಾದರೆ, ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಕುಂದುತ್ತದೆ ಎಂಬ ಕಾರಣದಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.ಆದರೆ ಸಿವಿಲ್ ಪ್ರಕರಣಗಳ ವಿಷಯದಲ್ಲಿ ಸ್ವಲ್ಪ ವಿನಾಯಿತಿ ಇದೆ. ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿವಿಲ್ ಪ್ರಕರಣಗಳನ್ನು ದಾಖಲಿಸಬಹುದಾದರೂ, ಅದಕ್ಕೂ ಮುನ್ನ ಕನಿಷ್ಠ ಎರಡು ತಿಂಗಳ ಲಿಖಿತ ನೋಟಿಸ್ ನೀಡುವುದು ಕಡ್ಡಾಯ.
ಈ ವಿಶೇಷ ಹಕ್ಕುಗಳು ಶಾಶ್ವತವಲ್ಲ. ಅವರು ಅಧಿಕಾರದಲ್ಲಿರುವವರೆಗೆ ಮಾತ್ರ ಅನ್ವಯಿಸುತ್ತವೆ. ಅಧಿಕಾರಾವಧಿ ಮುಗಿದ ಬಳಿಕ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸಾಮಾನ್ಯ ನಾಗರಿಕರಂತೆ ಕಾನೂನಿನ ಅಡಿಯಲ್ಲಿ ಬರುತ್ತಾರೆ. ಆ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಕ್ಕೂ, ಅಗತ್ಯವಿದ್ದರೆ ಅರೆಸ್ಟ್ ಮಾಡುವುದಕ್ಕೂ ಅವಕಾಶವಿರುತ್ತದೆ.ಇದೇ ವೇಳೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಸಂಸದರು ಅಥವಾ ಶಾಸಕರು ಈ ರೀತಿಯ ಸಂಪೂರ್ಣ ರಕ್ಷಣೆಯನ್ನು ಹೊಂದಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಕಾನೂನು ಎಲ್ಲರ ಮೇಲೂ ಸಮಾನವಾಗಿ ಅನ್ವಯಿಸುತ್ತದೆ.
ಒಟ್ಟಿನಲ್ಲಿ, ಈ ನಿಯಮವು ದೇಶದ ಸಾಂವಿಧಾನಿಕ ಹುದ್ದೆಗಳ ಘನತೆಯನ್ನು ಉಳಿಸುವ ಉದ್ದೇಶದಿಂದ ರೂಪುಗೊಂಡಿದೆ.












