ಪ್ರಕೃತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಚೆಸ್ ದಿನಾಚಾರಣೆ : “ಸ್ಪೆಲ್ ಬೀ” ಮತ್ತು “ಪ್ರಕೃತಿ ಚೆಸ್ ಅಕಾಡೆಮಿ” ಕಾರ್ಯಕ್ರಮಕ್ಕೆ ಚಾಲನೆ

suddionenews
2 Min Read

ಸುದ್ದಿಒನ್, ಚಿತ್ರದುರ್ಗ, (ಜು.20) : ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಚದುರಂಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಒಂದು ಚದುರಂಗದ ಕಾಯಿಯನ್ನು ನಡೆಸುವುದರ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದರೊಂದಿಗೆ ಪ್ರಕೃತಿ ಚೆಸ್ ಅಕಾಡೆಮಿಯನ್ನು ಪ್ರಾರಂಭಿಸಲಾಯಿತು. ಮಕ್ಕಳಲ್ಲಿ ಕಲಿಕೆಯನ್ನು ಉತ್ತಮಗೊಳಿಸುವ ಹಾಗೂ ಪರಿಪೂರ್ಣಗೊಳಿಸಲು ಸ್ಪೆಲ್ ಬಿ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.

ಪರಿವರ್ತನ ಟ್ರಸ್ಟ್‌ನ ಖಜಾಂಚಿ ಶ್ರೀಮತಿ ಶ್ವೇತಾ ಕಾರ್ತಿಕ್ ರವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಚೆಸ್ಟ್ ಆಟದ ಔಚಿತ್ಯ, ಪ್ರಯೋಜನ ಹಾಗೂ ಇದರ ಮಹತ್ವವನ್ನು ತಿಳಿಸಿಕೊಟ್ಟರು. ಮತ್ತು ರಾಷ್ಟ್ರೀಯ ಆಟಗಾರ ಹಾಗೂ ತರಬೇತುದಾರ ನವೀನ್ ಕುಮಾರ್ ರವರ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು. ನವೀನ್ ಕುಮಾರ್ ಅವರು ಮಾತನಾಡುತ್ತಾ, ಚೆಸ್ ಆಟ ಆಡುವುದರಿಂದ ನಮ್ಮ ಏಕಾಗ್ರತೆ, ಬುದ್ಧಿವಂತಿಕೆ, ತಾಳ್ಮೆ ಮತ್ತು ಸಂಯಮಗಳು ಹೆಚ್ಚಾಗುತ್ತದೆ. ಇದನ್ನು ಮೈಂಡ್ ಗೇಮ್, ವಾರ್ ಗೇಮ್ ಇಂಡೋರ್ ಗೇಮ್ ಎಂದು ಕರೆಯಲಾಗುತ್ತದೆ ಎಂದು ತಿಳಿಸುತ್ತಾ ಪ್ರಕೃತಿ ಚೆಸ್ ಅಕಾಡೆಮಿಯ 20 ನಿಮಿಷಗಳ ಆರಂಭಿಕ ತರಗತಿಯನ್ನು ನಡೆಸಿಕೊಟ್ಟರು. ನಂತರ ನವೀನ್ ಕುಮಾರ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ರೊಟೇರಿಯನ್ ಮಾರುತಿ ಮೋಹನ್ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ಶಾಲೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮವಹಿಸುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು  ಹಾಗೂ ಶಾಲೆಗೆ ನಿಯಮಿತವಾಗಿ ಹಾಜರಾಗಬೇಕೆಂದು ತಿಳಿಸಿದರು.

ಕಾರ್ಯದರ್ಶಿ ಕಾರ್ತಿಕ್ ಮಾತನಾಡುತ್ತಾ , ವಿದ್ಯಾರ್ಥಿಗಳು ಈ ಎಲ್ಲಾ ವಿನೂತನ ಕಾರ್ಯಕ್ರಮಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸ್ಪೆಲ್ ಬಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೋಲ್ಡ್ ಮೆಡಲ್ ನೀಡಲಾಗುವುದೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನು ಆತ್ಮೀಯವಾಗಿ ವಂದಿಸಿದರು.

ಸಹ ಶಿಕ್ಷಕಿ ಶ್ರೀಮತಿ ಕವಿತಾ ರವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಮತ್ತೋರ್ವ ಸಹ ಶಿಕ್ಷಕಿಯಾದ ಕುಮಾರಿ ಶ್ವೇತಾ ರವರು ಕಾರ್ಯಕ್ರಮಕ್ಕೆ ಸರ್ವರನ್ನು ಆದರ ಪೂರ್ವಕವಾಗಿ ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್ ನ ಉಪಾಧ್ಯಕ್ಷ ಉಮೇಶ್  ವೀ ತುಪ್ಪದ, ಪರಿವರ್ತನಾ ಟ್ರಸ್ಟ್ ನ ಟ್ರಸ್ಟಿ ಡಾ. ಮಧುಸೂದನ್ ರೆಡ್ಡಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *