ಸುದ್ದಿಒನ್, ಚಳ್ಳಕೆರೆ : ಸ್ಪರ್ಧಾ ಸಮಾಜದಲ್ಲಿ ತಂತ್ರಜ್ಞಾನದ ಆಸಕ್ತಿ ವಿದ್ಯಾರ್ಥಿಗಳಲ್ಲಿ ಅಗತ್ಯವಿದೆ ಎಂದು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿನ ಎಸ್ಆರ್ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ ಆಪರೇಷನ್ ಸಿಂಧೂರ ಯಶಸ್ವಿಗೆ ಕಾರಣರಾದ ಸೈನಿಕರಿಗೆ ಗೌರವ ಸಲ್ಲಿಸುವ ರೀತಿ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ವಿಮಾನ ಮಾದರಿಯ ಪರಿಕರಗಳನ್ನು ಉಡಾವಣೆ ಮಾಡುವ ಮೂಲಕ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ದೇಶದ ಗಡಿಯಂಚಿನ ಕಾಶ್ಮೀರ ಪರಿಸರದ ಪ್ರಕ್ಷುಬ್ಧ ಪರಿಸ್ಥಿತಿಗೆ ಘೋಷಣೆಯಾದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ವಿಶ್ವದ ಗಮನ ಸೆಳೆಯಲಾಗಿದೆ. ಇದರಿಂದ ಭಾರತೀಯ ಸೈನಿಕರ ಸಾಮರ್ಥ್ಯ ಮತ್ತು ದೇಶದ ತಂತ್ರಜ್ಞಾನ ಇತರೆ ದೇಶಗಳಿಗೂ ಗಮನಾರ್ಹವಾಗಿದೆ. ಉಗ್ರರನ್ನು ಸದಾ ಪೋಷಣೆ ಮಾಡುತ್ತಿರುವ ಪಾಕಿಸ್ತಾನವನ್ನು ಭಾರತ ಎದುರು ಹಾಕಿಕೊಂಡಿದೆ. ಆದರೆ, ಇತರೆ ದೇಶಗಳು ಭಾರತಕ್ಕೆ ಬೆಂಬಲ ಸೂಚಿಸುವ ಬದಲು ಒಳ ಸಂಚುಗಾರಿಕೆ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಬಗ್ಗೆ ಭಾರತೀಯರಲ್ಲಿ ಜಾಗೃತಿ ಮೂಡಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ದೇಶಾಭಿಮಾನ ರೂಢಿಯಾಗಬೇಕು. ಸ್ಥಳೀಯವಾಗಿ ಡಿಆರ್ಡಿಒ ಸಂಸ್ಥೆಗಳ ಸ್ಥಾಪನೆಯಿಂದ ವಿಜ್ಞಾನ ನಗರಿಯಾಗಿ ವಿಶ್ವದ ಸ್ಥಾನ ಪಡೆಯುತ್ತಿರುವ ತಾಲೂಕಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಬೆಳೆಯಬೇಕು. ಬಯಲುಸೀಮೆಯಲ್ಲಿ ಮಳೆಯಾಶ್ರಿತ ಕೃಷಿ ಚಟುವಟಿಕೆ ಕಾಣುತ್ತೇವೆ. ಇದರಿಂದ ಶ್ರಮಿಕ ರೈತಾಪಿ ವರ್ಗ ಉತ್ತಮ ಜೀವನ ಕಾಣಲು ಸಾಧ್ಯವಿಲ್ಲ. ಆದರೂ, ಇಲ್ಲಿನ ಬಹುಪಾಲು ಕೂಲಿ ಕಾರ್ಮಿಕ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಶಿಕ್ಷಣ ಕಲಿಯಬೇಕು. ಶಿಕ್ಷಣ ಉದ್ಯೋಗಕ್ಕೆ ಸೀಮಿತವಾಗಬಾರದು. ಪಾಲಕರು, ಶಿಕ್ಷಕರು ಮತ್ತು ಶಾಲಾ ಸಂಸ್ಥೆಗೆ ಕೀರ್ತಿ ತರುವ ರೀತಿ ಸಾಧನೆ ಆಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಬಿ.ಎಸ್. ವಿಜಯ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯಬೇಕು. ಪರಿಸರದಲ್ಲಿ ಅನುಪಯುಕ್ತವಾಗಿ ಸಿಗುವ ಸರಕು ಬಳಸಿ ತಂತ್ರಜ್ಞಾನವಾಗಿ ರೂಪಿಸಬೇಕು. ಶಿಕ್ಷಣ ಬದಲಾವಣೆಯಲ್ಲಿ ವಿದ್ಯಾರ್ಥಿಯ ಕ್ರಿಯಾಶೀಲತೆ ಪ್ರಧಾನವಾಗಬೇಕು. ಪ್ರಸ್ತುತ ದೇಶದ ಚಟುವಟಿಕೆಗಳಿಗೆ ಸ್ಪಂದಿಸುವ ಭಾವನೆಯಲ್ಲಿ ವಿದ್ಯಾರ್ಥಿ ಸಮಾಜಮುಖಿಯಾಗಿ ರೂಪಗೊಳ್ಳಬೇಕು ಎಂದು ಹೇಳಿದರು.
ಶಾಲಾ ಶಿಕ್ಷಕರಾದ ವಾಣಿ, ಸಹನಾ, ಅರುಣ್, ಅಶೋಕ್, ಸುಷ್ಮಾ, ನಯಾಜ್, ಶಿಲ್ಪಾ, ಗೋಪಾಲ್ ಮತ್ತಿತರರಿದ್ದರು.


