ಯುದ್ಧದಿಂದಾಗಿ ದೇಶದ ಜನ ದೊಡ್ಡಮಟ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಚ ತಾರಕಕ್ಕೇರಿರುವ ಬೆನ್ನಲ್ಲೇ ಭಾರತ ಸರ್ಕಾರವೂ ಬುಧವಾರ ಒಂದು ಎಚ್ಚರಿಕೆಯ ಗಂಟೆ ಬಾರಿಸಿದೆ. ಇರಾನ್ ನಲ್ಲಿರುವ ತನ್ನ ಪ್ರಜೆಗಳಿಗೆ ತುರ್ತು ಸೂಚನೆ ನೀಡಿದ್ದು, ಆದಷ್ಟು ಬೇಗ ಇರಾನ್ ತೊರೆಯುವಂತೆ ಸೂಚಿಸಿದೆ.
ಇರಾನ್ ನಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಸ್ಪೋಟಕವಾಗುತ್ತಿರುವ ಹಿನ್ನಲೆಯಲ್ಲಿ, ನಾಗರಿಕರ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದ್ದು, ಭಾರತೀಯ ನಾಗರಿಕರು ಲಭ್ಯವಿರುವ ಮತ್ತು ಸೂಚಿಸಿದ ಸುರಕ್ಷಿತ ಮಾರ್ಗಗಳನ್ನು ಬಳಸಿಕೊಂಡು ವಿಳಂಬ ಮಾಡದೆ ದೇಶ ಬಿಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಅಷ್ಟೇ ಅಲ್ಲ ರಾಯಭಾರ ಕಚೇರಿಯೊಂದಿಗೆ ಪೂರ್ವ ಸಮಾಲೋಚನೆ ಅಥವಾ ಸಮನ್ವಯವಿಲ್ಲದೆ ಯಾವುದೇ ಅಂತರಾಷ್ಟ್ರೀಯ ಗಡುಗಳನ್ನು ಸಮೀಪಿಸುವುದಕ್ಕೆ ಪ್ರಯತ್ನಿಸಬಾರದು ಎಂಬುದನ್ನು ಒತ್ತಿ ಒತ್ತಿ ತಿಳಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಭಾರತ ಈ ಎಚ್ಚರಿಕೆಯನ್ನ ನೀಡಿದೆ. ಯುದ್ಧ ಆರಂಭವಾದಾಗ 9 ಸಾವಿರ ಭಾರತೀಯರು ಇರಾನ್ ನಲ್ಲಿದ್ದರು. ಆ ಪೈಕಿ ಈಗಾಗಲೇ 1,800 ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಇನ್ನು ಫೆಬ್ರವರಿ 28ರಿಂದ ಈ ಯುದ್ಧ ಆರಂಭವಾಗಿದೆ. ಪಾಕಿಸ್ತಾನದಲ್ಲಿ ವಾಷಿಂಗ್ಟನ್ ಜೊತೆಗೆ ನೇರ ಮಾತುಕತೆಗೆ ಒಪ್ಪಿಕೊಂಡಿರೋದಾಗಿ ಟೆಹ್ರಾನ್ ತಿಳಿಸಿದೆ. ಸದ್ಯ ಎರಡು ವಾರಗಳ ಕಾಲ ವಿರಾಮ ಘೋಷಣೆಯಾಗಿದೆ. ಇನ್ನು ಇರಾನ್ ನಲ್ಲಿರುವ ಭಾರತೀಯರ ನೆರವಿಗಾಗಿ +989128109115 ನಂಬರ್ ಅನ್ನು ನೀಡಲಾಗಿದೆ. ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.














