ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಕುಟುಂಬ ವ್ಯಾಜ್ಯಗಳು : ನ್ಯಾ. ಉಜ್ವಲ್ ವೀರಣ್ಣ ವಿಷಾದ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 16 : ಪಾಶ್ಚಿಮಾತ್ಯ ದೇಶದಲ್ಲಿ ಕುಟುಂಬಗಳು ಇಲ್ಲ. ಭಾರತ ದೇಶದಲ್ಲಿ ಮಾತ್ರ ಕುಟುಂಬ ವ್ಯವಸ್ಥೆಯನ್ನು ಕಾಣಲು ಸಾಧ್ಯವಿದೆ. ಇದು ನಮ್ಮ ಮಣ್ಣಿನ ಗುಣವಾಗಿದೆ. ಅದರಲ್ಲೂ ಅವಿಭಕ್ತ ಕಟುಂಬಗಳು ಹೆಚ್ಚಾಗಿದೆ ಎಂದು ಎರಡನೇ ಸಿವಿಲ್ ನ್ಯಾಯಾಧೀಶರಾದ ಉಜ್ವಲ್ ವೀರಣ್ಣ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದ ಐದನೇ ದಿನವಾದ ಭಾನುವಾರ ಹಮ್ಮಿಕೊಂಡಿದ್ದ ಕುಟುಂಬ ಪ್ರಭೋದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ 25 ರಿಂದ 30 ಜನ ವಾಸ ಮಾಡುತ್ತಿದ್ದರು. ಇದರಲ್ಲಿ 5 ರಿಂದ 6 ತಲೆಮಾರು ಜನಾಂಗ ಇತ್ತು. ಆದರೆ ಇಂದಿನ ದಿನಮಾನದಲ್ಲಿ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕುಟುಂಬದಲ್ಲಿ ವ್ಯಾಜ್ಯಗಳು ಹೆಚ್ಚಾಗಿದೆ. ನ್ಯಾಯಾಲಯದಲ್ಲಿಯೂ ಸಹಾ ಕುಟುಂಬದ ವ್ಯಾಜ್ಯಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.

 

ಇಂದಿನ ದಿನಮಾನದಲ್ಲಿ ನಮ್ಮ ಮಕ್ಕಳಿಗೆ ಜೀವನ ಶೈಲಿಯಲ್ಲಿಯನ್ನು ಸರಿಯಾದ ರೀತಿಯಲ್ಲಿ ಕಲಿಸುತ್ತಿಲ್ಲ. ಪೋಷಕರು ಮಕ್ಕಳನ್ನು ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಸಂಸ್ಕಾರವನ್ನು ಕಲಿಸುತ್ತಿಲ್ಲ. ಕುಟುಂಬ ಎಂದರೆ ಏನು ಎಂಬುದನ್ನು ಹೇಳಿಕೊಡುತ್ತಿಲ್ಲ. 100 ಕುಟುಂಬಗಳು ಒಂದು ಸಮಾಜವನ್ನು ನಿರ್ಮಾಣ ಮಾಡುತ್ತವೆ. ಭಾರತ ದೇಶದಲ್ಲಿ ಕುಟುಂಬದ ಮಹತ್ವವನ್ನು ತಿಳಿಯಬೇಕಿದೆ. ನಮ್ಮಲ್ಲಿನ ಆಚಾರ, ವಿಚಾರ, ಸಂಪ್ರದಾಯ, ರೀತಿರಿವಾಜು ಉಡುಗೆ, ಹಬ್ಬಗಳು ಆಹಾರ ಪದ್ದತಿ,ಪದಾರ್ಥ ಇವೆಲ್ಲಾ ಕುಟುಂಬದ ಜೀವನ ಶೈಲಿಗಳಾಗಿವೆ. ಸ್ವದೇಶಿ ಮೇಳವನ್ನು ಆಯೋಜನೆ ಮಾಡಿರುವುದರಿಂದ ಇಲ್ಲಿನ ಸಣ್ಣ ಸಣ್ಣ ಕೈಗಾರಿಕೆಯವರಿಗೆ ತುಂಬಾ ಉಪಯೋಗವಾಗಿದೆ, ನಾನು ಈ ಮೇಳದಲ್ಲಿ ಭಾಗವಹಿಸಿದ್ದು ತುಂಬಾ ಸಂತೊಷವನ್ನು ಉಂಟು ಮಾಡಿದೆ ಎಂದರು.

ಕುಟುಂಬ ಪ್ರಮೋದ್‍ನ ರಾಜ್ಯ ಸಹ ಸಂಚಾಲಕರಾದ ಕುಮಾರಸ್ವಾಮಿ ಮಾತನಾಡಿ, ಕುಟುಂಬ ಎಂಬ ಪದ ಸರಳವಾಗಿದ್ದರೂ ಅದರ ಮಹತ್ವ ದೊಡ್ಡದಾಗಿದೆ. ಭಾರತ ಪುರಾತನ ದೇಶವಾಗಿದ್ದು, ಇದರಲ್ಲಿ ಸಂಸ್ಕೃತಿ ವೈವಿಧ್ಯಮಯವಾಗಿದೆ. ದೇಶ ಜನರಿಗೆ ಯೋಗ, ಜ್ಞಾನ ಆಧ್ಯಾತ್ಮವನ್ನು ನೀಡಿದ ದೇಶವಾಗಿದೆ. ವಿಶ್ವಕ್ಕೆ ಮಾದರಿಯಾಗಿದೆ, ವಿದೇಶಿ ಜನತೆ ನಮ್ಮ ದೇಶದ ಜೀವನ ಪದ್ದತಿಯನ್ನು ಅನುಸರಿಸುತ್ತಿದ್ದಾರೆ ಆದರೆ ನಾವು ನಮ್ಮ ಪುರಾತನವಾದ ಪದ್ದತಿಯನ್ನು ಬಿಟ್ಟು ವಿದೇಶಿ ಸಂಸ್ಕೃತಿ ಸಂಪ್ರದಾಯವನ್ನು ಅನುಕರಣೆ ಮಾಡುತ್ತಿದ್ದೇವೆ. ಇದರ ಫಲವಾಗಿ ಚಿಕ್ಕ ಚಿಕ್ಕ ಕುಟುಂಬಗಳಾಗುತ್ತಿವೆ. ವಸುದೈವ ಕುಟುಂಬಂ ಎಂದು ದೇಶವನ್ನು ಕರೆಯಲಾಗುತ್ತಿದೆ. ವಿಶ್ವ ಕುಟುಂಬ ಎಂದು ಭಾರತ ದೇಶವನ್ನು ಕರೆಯಲಾಗುತ್ತಿದೆ. ದೇಶದ ಸಂಸ್ಕೃತಿ ಆ ರೀತಿಯಲ್ಲಿ ಇದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ನಾವು ಇಂದ್ರಿಯಗಳನ್ನು ನಿಗ್ರಹಿಸಬೇಕಿದೆ. ಆಗ ಮಾತ್ರ ನಮ್ಮಲ್ಲಿ ಸಮತೋಲನವಾದ ಕುಟುಂಬಗಳು ಇರಲು ಸಾಧ್ಯವಿದೆ. ಹೆಚ್ಚಾಗಿ ಮೊಬೈಲ್ ನೋಡುವುದರಿಂದ ಕಣ್ಣಿಗೆ ತೊಂದರೆಯಾಗುತ್ತದೆ ಇದನ್ನು ನಿಯಂತ್ರಿಸಬೇಕಿದೆ, ರಾತ್ರಿ ಮಲಗುವ ಮುನ್ನಾ ಧ್ಯಾನವನ್ನು ಮಾಡುವುದರ ಮೂಲಕ ದೇಹವನ್ನು ಸಮತೋಲನಕ್ಕೆ ತರಬೇಕಿದೆ. ಇದರಿಂದ ಮನಸ್ಸು ಪ್ರಶಾಂತವಾಗಿ ಇರುತ್ತದೆ, ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದರಿಂದ ಮನೆಯಲ್ಲಿನ ವಸ್ತುಗಳು ಬಳಕೆ ಮಾಡಿದಂತೆ ಆಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್ ಸಂಯೋಜಕರಾದ ಕೆ,ಎಸ್.ನವೀನ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಮಲ್ಲಿಕಾರ್ಜನ್, ಗಾಯತ್ರಿ ಶಿವರಾಂ, ನಾಗರಾಜ್ ಸಗಂ, ಮಲ್ಲಿಕಾರ್ಜನ್ ವೆಂಕಟೇಶ್ ಯಾದವ್ ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Enable Notifications OK No thanks