ಮಾನವನ ದುರಾಸೆಗೆ ಕಾಡು ನಾಶವಾದರೆ ಪ್ರಕೃತಿಯಲ್ಲಿ ಅಸಮತೋಲನ : ಸಾಕ್ಷಿ ಹೆಗಡೆ

2 Min Read

 

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಅ.31): ಕರ್ನಾಟಕವನ್ನು ಸ್ವಚ್ಚ ಹಾಗೂ ಹಸಿರಿನಿಂದ ಕಂಗೊಳಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಿಂದ ಅ.16 ರಂದು ಬೈಕಿನಲ್ಲಿ ನಾಡಿನಾದ್ಯಂತ ಒಂಟಿಯಾಗಿ ಸಂಚಾರ ಹೊರಟಿರುವ 21 ವರ್ಷದ ಯುವತಿ ಸಾಕ್ಷಿ ಹೆಗಡೆ ಐತಿಹಾಸಿಕ ಏಳುಸುತ್ತಿನ ಕೋಟೆ ಚಿತ್ರದುರ್ಗಕ್ಕೆ ಆಗಮಿಸಿದಾಗ ವಿವಿಧ ಸಂಘಟನೆಗಳವರು ಸ್ವಾಗತಿಸಿ ಅಭಿನಂದಿಸಿದರು.

ಪ್ರವಾಸಿ ಮಂದಿರದಲ್ಲಿ ಸನ್ಮಾನ ಸ್ವೀಕರಿಸಿ ಪ್ರಯಾಣದ ತನ್ನ ಉದ್ದೇಶವನ್ನು ಹಂಚಿಕೊಂಡ ಸಾಕ್ಷಿ ಹೆಗಡೆ ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದ್ದೇನೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳವರಲ್ಲಿ ಸ್ವಚ್ಚ ಕರ್ನಾಟಕ, ಹಸಿರು ಕರ್ನಾಟಕವನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ. ಪರಿಸರಕ್ಕೆ ಮಾರಕವಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧವಾಗಬೇಕು. ಸಕಲ ಜೀವರಾಶಿಗಳಿಗೂ ಉಸಿರಾಟಕ್ಕೆ ಶುದ್ದವಾದ ಗಾಳಿ ನೀಡುವ ಗಿಡ-ಮರಗಳನ್ನು ಕಡಿಯುವುದು ಬೇಡ. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮರಗಳನ್ನು ಕಡಿಯುವ ಅನಿವಾರ್ಯತೆ ಎದುರಾದರೆ ಏನು ಮಾಡಲಿಕ್ಕಾಗಲ್ಲ. ಆದರೆ ಮಾನವನ ದುರಾಸೆಗೆ ಕಾಡು ನಾಶವಾದರೆ ಪ್ರಕೃತಿಯಲ್ಲಿ ಅಸಮತೋಲನವಾಗುತ್ತದೆ ಎನ್ನುವ ಸಂದೇಶವನ್ನಿಟ್ಟುಕೊಂಡು ರಾಜ್ಯದ 31 ಜಿಲ್ಲೆಗಳಲ್ಲಿ 31 ದಿನಗಳ ಕಾಲ ನಾಲ್ಕು ಸಾವಿರ ಕಿ.ಮೀ. ಪ್ರಯಾಣಿಸುತ್ತಿದ್ದೇನೆಂದು ತಮ್ಮ ಅನುಭವ ಹಂಚಿಕೊಂಡರು.

ಈವರೆಗೂ ಎರಡು ಸಾವಿರ ಕಿ.ಮೀ.ಪ್ರಯಾಣಿಸಿದ್ದೇನೆ. ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಟೀಕಿಸುವವರು ಇದ್ದಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಕೀಳೇಶ್ವರಿ ಕ್ಲಬ್‍ನವರು ನನ್ನ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ತಂದೆ ಶಿವರಾಂಹೆಗಡೆ, ತಾಯಿ ಪುಷ್ಪಹೆಗಡೆರವರ ಪ್ರೋತ್ಸಾಹವೂ ಇದೆ. ಒಂದು ದಿನಕ್ಕೆ ಒಂದು ಜಿಲ್ಲೆಗೆ ಭೇಟಿ ನೀಡುತ್ತೇನೆ. ಕಳೆದ ಮೇ.25 ರಿಂದ ಜೂ.6 ರವರೆಗೆ ಕಾಶ್ಮೀರದವರೆಗೆ ಬೈಕ್‍ನಲ್ಲಿ ಹೋಗಿದ್ದೆ ಎನ್ನುವುದನ್ನು ನೆನಪಿಸಿಕೊಂಡರು.

ದಲಿತ ಮುಖಂಡರುಗಳಾದ ಜೆ.ಜೆ.ಹಟ್ಟಿ ಬಿ.ರಾಜಪ್ಪ, ಮರಿಕುಂಟೆ ಮಹಲಿಂಗಪ್ಪ, ರಾಷ್ಟ್ರೀಯ ಮಾದಿಗ ಯುವ ಸೇನೆ ಅಧ್ಯಕ್ಷ ಬಿ.ಓ.ಗಂಗಾಧರಯ್ಯ, ಉಪ್ಪಾರ ಸಮಾಜದ ಮುಖಂಡರುಗಳಾದ ಆರ್.ಮೂರ್ತಿ, ಗಂಗಣ್ಣ, ಯಾದವ ಸಮಾಜದ ನರಸಿಂಹಮೂರ್ತಿ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಾನಪದ ಹಾಡುಗಾರ ಹೆಚ್.ಪ್ಯಾರೇಜಾನ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದು, ಸಾಕ್ಷಿ ಹೆಗಡೆಗೆ ಶುಭ ಹಾರೈಸಿದರು.

Share This Article
Leave a Comment

Leave a Reply

Your email address will not be published. Required fields are marked *