ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಖುರ್ಚಿ ಕದನ ಬಹಳ ಜೋರಾಗಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಅಂತ ಕಾಯ್ತಾ ಇದ್ರೆ, ಮತ್ತೊಂದು ಕಡೆ ದಲಿತ ಸಿಎಂ ವಿಚಾರ ಸದ್ದು ಮಾಡ್ತಾ ಇದೆ. ದಲಿತ ಸಮುದಾಯದ ನಾಯಕರು ಒಟ್ಟಾಗಿ ಈಗ ಪರಮೇಶ್ವರ್ ಪರ ಬ್ಯಾಟ್ ಬೀಸ್ತಾ ಇದ್ದಾರೆ. ಸಿಎಂ ಬದಲಾವಣೆ ಮಾಡುವುದಾದರೆ ಪರಮೇಶ್ವರ್ ಅವರಿಗೆ ನೀಡಬೇಕು ಒತ್ತಾಯ ಜೋರಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಿಎಂ ಆಗುವ ಅವಕಾಶವಿತ್ತು. ಆದರೆ ಅದು ಆ ಸಮಯದಲ್ಲಿ ಕೈ ತಪ್ಪಿತ್ತು ಎಂಬ ನೋವನ್ನ ಖರ್ಗೆ ಅವರು ಹಂಚಿಕೊಂಡಿದ್ದರು. ಹೀಗಾಗಿಯೇ ಅವರು ರಾಜ್ಯ ರಾಜಕಾರಣಕ್ಕೆ ಬರಬಹುದು, ಸಿಎಂ ಆಗಬಹುದು ಎಂಬ ವಿಚಾರವೂ ಹರಿದಾಡಿತ್ತು. ಇದೀಗ ದಲಿತಪರ ನಾಯಕರು ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಅವರನ್ನೇ ಸಿಎಂ ಮಾಡಿ, ಒಂದು ವೇಳೆ ಅವರು ಬಾರದೆ ಇದ್ದರೆ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಬೇಕು ಅಂತ ಹೇಳಿ ದಲಿತ ಸಚಿವರು, ಶಾಸಕರು, ನಾಯಕರು ಸಭೆಯನ್ನ ನಡೆಸಿದ್ದಾರೆ.
ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ ಸೇರಿದಂತೆ ಹಲವರು ಈ ಸಭೆಯಲ್ಲಿ ಸೇರಿದ್ದಾರೆ. ಈ ಸಭೆಯಲ್ಲಿ ಪರಮೇಶ್ವರ್ ಅವರ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ. ಅತ್ತ ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡ್ತಾರೆ. ಆ ನಂತರ ತಮಗೆ ಪೂರಕವಾದಂತ ವಾತಾವರಣ ನಿರ್ಮಾಣ ಆಗಬಹುದು ಎಂಬ ನಿರೀಕ್ಷೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದ್ದಾರೆ ಎನ್ನಲಾಗ್ತಾ ಇದೆ. ಇತ್ತ ದಲಿತ ಸಿಎಂ ಕೂಗು ಕೇಳಿಸ್ತಾ ಇದೆ.




