ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಬಿ.ಎನ್.ಚಂದ್ರಪ್ಪ

3 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.25 : ಸಂವಿಧಾನ ಉಳಿದು ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಜಯಶಾಲಿಯನ್ನಾಗಿ ಮಾಡಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮತದಾರರಲ್ಲಿ ಮನವಿ ಮಾಡಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 2014 ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಚಿತ್ರದುರ್ಗ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಟ್ಟರು.

ಐದು ವರ್ಷಗಳ ಕಾಲ ಮನೆಯ ಮಗನಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮತದಾರರಿಗೆ ಎಲ್ಲಿಯೂ ಕಳಂಕ ತರಲಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ 63 ಸಲ ಮಾತನಾಡಿದ್ದೇನೆ. 2019 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಹೋದ ಬಿಜೆಪಿ ಅವರು ಏನು ಕೆಲಸ ಮಾಡಿದ್ದಾರೆನ್ನುವುದಕ್ಕೆ ಎಲ್ಲಿಯಾದರೂ ಸಾಕ್ಷಿಯಿದ್ದರೆ ತೋರಿಸಿ ಎಂದು ಕ್ಷೇತ್ರದ ಜನತೆಯನ್ನು ಪ್ರಶ್ನಿಸಿದರು.?

ಚಿತ್ರದುರ್ಗ ಲೋಕಸಭಾ ಕ್ಷೇತ್ರಾದ್ಯಂತ ನನ್ನ ಅವಧಿಯಲ್ಲಿ ಎಲ್ಲಾ ಕಡೆ ಶುದ್ದ ಕುಡಿಯುವ ನೀರಿನ ಘಟಕ, ಹೈಮಾಸ್ ದೀಪ, ಶಾಲಾ-ಕಾಲೇಜು, ಬಸ್‍ನಿಲ್ದಾಣಗಳನ್ನು ನಿರ್ಮಿಸಿದ್ದೇನೆ. ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ಜಾತಿ ಧರ್ಮಗಳನ್ನು ಎತ್ತಿ ಕಟ್ಟಿರುವುದನ್ನು ಬಿಟ್ಟರೆ ಅಭಿವೃದ್ದಿ ಶೂನ್ಯ. ಕೇಂದ್ರೀಯ ವಿದ್ಯಾಲಯ, ಮೆಡಿಕಲ್ ಕಾಲೇಜು, ಭದ್ರಾಮೇಲ್ದಂಡೆ ಯೋಜನೆಗೆ ಸಾಕಷ್ಟು ಹೋರಾಡಿದ್ದೇನೆ. ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಸಚಿವರಾಗಿದ್ದ ಎ.ನಾರಾಯಣಸ್ವಾಮಿರವರ ಕೊಡುಗೆ ಏನು?

ಕಳೆದ ಚುನಾವಣೆಯಲ್ಲಿಯೂ ಜನ ನನಗೆ ಮತ ನೀಡಿದರು. ಆದರೆ ಇ.ವಿ.ಎಂ. ಏನು ನಿರ್ಣಯಿಸಿತೋ ಗೊತ್ತಿಲ್ಲ. ಎಂಟು ಕ್ಷೇತ್ರಗಳಲ್ಲಿಯೂ ಗೆದ್ದವರಿಗಿಂತ ನಾಲ್ಕು ಪಟ್ಟು ಹೆಚ್ಚು ಸುತ್ತಾಡಿದ್ದೇನೆ. ಬುದ್ದ, ಬಸವ, ಅಂಬೇಡ್ಕರ್, ಕನಕದಾಸರ ಆಶಯದಂತೆ ಸರ್ವಾ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ನಾನು ಮಾದಿಗ ಜನಾಂಗದಲ್ಲಿ ಹುಟ್ಟಿರಬಹುದು. ಸರ್ವ ಜನಾಂಗದ ಜೊತೆಯಲ್ಲಿದ್ದೇನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಅನೇಕ ಆಕಾಂಕ್ಷಿಗಳಿದ್ದರು. ಎಲ್ಲರನ್ನು ಬಿಟ್ಟು ನನಗೆ ಪಕ್ಷ ಟಿಕೇಟ್ ನೀಡಿದೆ ಎನ್ನುವ ಸೊಕ್ಕು ಇಲ್ಲ.

ಮತ್ತೊಬ್ಬರ ಮೇಲೆ ಕೆಸರೆರೆಚುವ ಕೆಲಸ ಮಾಡಬಾರದು ಎಂದು ಆಕಾಂಕ್ಷಿಗಳಿಗೆ ಚುರುಕು ಮುಟ್ಟಿಸಿದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ವರಿಷ್ಟರು ನನ್ನನ್ನು ಉಮೇದುವಾರನನ್ನಾಗಿ ಮಾಡಿದ್ದಾರೆ. ದೇಶದಲ್ಲಿ ಜನ ನೆಮ್ಮದಿಯಾಗಿ ಇರಬೇಕಾಗಿರುವುದರಿಂದ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನತೆಯಲ್ಲಿ ವಿನಂತಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ರವಿಕುಮಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ವಿಶ್ವಕರ್ಮ ವಿಭಾಗದ ಪ್ರಸನ್ನಕುಮಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ಟಿ.ಜಗದೀಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಮರುಳಾರಾಧ್ಯ, ಅಲ್ಲಾಭಕ್ಷಿ, ಟಿಪ್ಪುಖಾಸಿಂಆಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ, ಮಾಜಿ ಸದಸ್ಯರುಗಳಾದ ಆರ್.ನರಸಿಂಹಮೂರ್ತಿ, ಅನಂತ್, ಮುನಿರಾ ಎ.ಮಕಾಂದಾರ್, ಮೆಹಬೂಬ್ ಖಾತೂನ್, ಮೋಕ್ಷರುದ್ರಸ್ವಾಮಿ, ರೇಣುಕ, ಜಿಲ್ಲಾ ಕಾಂಗ್ರೆ ಕಿಸಾನ್ ಸೆಲ್ ವಿಭಾಗದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶಿವಲಿಂಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿದ್ದರು.

ಚಿತ್ರದುರ್ಗ : ಮುಂದಿನ ತಿಂಗಳು ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಬಿ.ಎನ್.ಚಂದ್ರಪ್ಪ ಸೋಮವಾರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದಾಗ ಬೃಹಧಾಕಾರವಾದ ಹೂಮಾಲೆಯನ್ನು ಹಾಕಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರೀತಿ ಅಭಿಮಾನ ತೋರಿಸಿ ಬರಮಾಡಿಕೊಂಡರು.

ಕನಕಾಂಬರ, ಸುಗಂಧರಾಜ, ಹಸಿರುಪತ್ರೆ ಹಾಗೂ ಗುಲಾಬಿ ಹೂಗಳಿಂದ ಕೂಡಿದ್ದ ಬೃಹಧಾಕಾರವಾದ ಹಾರವನ್ನು ಜೆ.ಸಿ.ಬಿ. ಸಹಾಯದಿಂದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಸಮರ್ಪಿಸಲಾಯಿತು. ಮತ್ತೊಂದು ಜೆ.ಸಿ.ಬಿ.ಯಿಂದ ಕಾರ್ಯಕರ್ತರು ಚಂದ್ರಪ್ಪನವರ ಮೇಲೆ ಹೂಮಳೆ ಸುರಿಸಿದರು.

ಕಾಂಗ್ರೆಸ್ ಕಚೇರಿ ಮೇಲೆ ನಿಂತಿದ್ದ ಕಾರ್ಯಕರ್ತರು ಹೂವಿನ ರಾಶಿ ಎರಚಿ ಸಂಭ್ರಮಿಸಿದರು, ಡೊಳ್ಳು, ತಮಟೆ ಸದ್ದಿಗೆ ಕಾರ್ಯಕರ್ತರು ಕೇಕೆ ಸಿಳ್ಳೆ ಹಾಕುತ್ತಿದ್ದುದನ್ನು ನೋಡಿದರೆ ಚುನಾವಣೆಯಲ್ಲಿ ಗೆದ್ದೆಬಿಟ್ಟಿದ್ದಾರೇನೋ ಎನ್ನುವ ವಾತಾವರಣ ಕಾಂಗ್ರೆಸ್ ಕಚೇರಿ ಎದುರು ನಿರ್ಮಾಣವಾಗಿತ್ತು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಜೆ.ಸಿ.ಬಿ. ಮೇಲೆ ನಿಂತಿದ್ದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕಾರ್ಯಕರ್ತರು, ಸಾರ್ವಜನಿಕರಿಗೆ ಕೈಮುಗಿದು ಕೃತಜ್ಞತೆಗಳನ್ನು ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *