ಬೆಂಗಳೂರು: ಮಾಜಿ ಸಚುವ ಹೆಚ್ ಡಿ ರೇವಣ್ಣ ಅವರು ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಯಾವ ರೀತಿಯ ದ್ವೇಷ ಇದೆ ಅಂದ್ರೆ, ಮಾಜಿ ಪ್ರಧಾನಮಂತ್ರಿಗೆ, ಅಂದು ನಾಲ್ಕು ಜನ ಕೊಟ್ಟಿದ್ದರು. ಆದರೆ ಇಂದು ವಾಪಾಸ್ ತಗೊಂಡು, ಕಾನೂನಲ್ಲಿ ಅವಕಾಶ ಇಲ್ಲ ಅಂತಾರೆ. ಅದು ಮಾಜಿ ಪ್ರಧಾನಿಗೆ. ಎಷ್ಟು ಲೂಟಿ ನಡೀತಾ ಇದೆ. ಎಲ್ಲವನ್ನು ಎಳೆ ಎಳೆ ಬಿಡಿಸ್ತೀನಿ ಎಂದು ದೇವೇಗೌಡರಿಗೆ ನೀಡಿದ್ದ ಸೌಲಭ್ಯದ ಬಗ್ಗೆ ಹರಿಹಾಯ್ದಿದ್ದಾರೆ.
ಎರಡು ವರ್ಷದಿಂದ ನಾನು ಕಾಯ್ತಾ ಇದ್ದೀನಿ. ರೇವಣ್ಣರದ್ದು ಮುಗಿದೇ ಹೋಗಿದೆ ಅಂತ ತಿಳ್ಕೊಂಡವ್ರೆ. ಪರಮೇಶಣ್ಣವ್ರೆ ರೇವಣ್ಣ ಅವರದ್ದು ಶಕ್ತಿ ಪ್ರದರ್ಶನ 2028ಕ್ಕೆ ತೋರಿಸ್ತೀನಿ. ನೀವೂ ಡಿಸಿಎಂ ಇದ್ರಿ, ನಾನು ಮಂತ್ರಿ ಇದ್ದೆ. ದೆಲ್ಲಿಯಲ್ಲಿ ಏನು ನಡೀತು, ರೇವಣ್ಣನನ್ನ ಮುಗಿಸಬೇಕು ಅಂತ. ಅದಕ್ಕೆಲ್ಲ ನಾನೇನು ಕೇರ್ ಮಾಡಿಲ್ಲ. ಚಾಲೆಂಜ್ ಮಾಡಿನೇ ರಾಜಕೀಯದಲ್ಲಿ ಇದ್ದೆ.

ಪರಮೇಶ್ವರ್ ಅವರು ಇವತ್ತು ಇಲ್ಲಿ ಕೂತವ್ರೆ. ನನ್ಮೇಲೆ ಬೆಂಗಳೂರಿಗೆ ಕರ್ಕೊಂಡು ಬಂದು ಎಫ್ಐಆರ್ ಹಾಕಿಸಿದ್ರಲ್ಲ ಸರ್. ಯಾವ್ದಾದ್ರೂ ಫೋಟೋ ಇತ್ತ ನಂದು, ಯಾವ್ದಾದ್ರೂ ಕ್ಯಾಸೆಟ್ ಇತ್ತ. ಯಾವ ರೀತಿ ಮಾಡುದ್ರಿ ಎಫ್ಐಆರ್. ಎಲ್ಲಿ ಪರಮೇಶಣ್ಣ ನೀವೆಲ್ಲಾ ಈಗ ದಾರಿ ತೋರಿಸಿಕೊಡ್ತಾ ಇದ್ದೀರಿ. ಮುಂದೆ ಯಾವ ರೀತಿ ಸರ್ಕಾರವನ್ನ ನಡೆಸಬೇಕು ಅಂತ. ಪರಮೇಶ್ವರ್ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ಪರಿಸ್ಥಿತಿಗೆ ಅವರು ಸಿಕ್ಕಿಬಿದ್ದಿದ್ದಾರೆ. ನಾನ್ಯಾಕೆ ಅವರನ್ನ ಈ ಪರಿಸ್ಥಿತಿಯಲ್ಲಿ ದೂರುವುದಕ್ಕೆ ಹೋಗಲಿ ಎಂದು ಕಾಂಗ್ರೆಸ್ ವಿರುದ್ಧ ಕೆಂಡಕಾರಿದ್ದಾರೆ.















