ಚಿತ್ರದುರ್ಗ | ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥವಾದ ಒಟ್ಟು ಪ್ರಕರಣಗಳೆಷ್ಟು ? ಇಲ್ಲಿದೆ ಮಾಹಿತಿ…!

1 Min Read

ಸುದ್ದಿಒನ್, ಚಿತ್ರದುರ್ಗ. ಡಿ.15:  ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ 9ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 3204 ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ 1,06,421 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥದ ಒಟ್ಟು ಮೊತ್ತ 17,36,39,597 ರೂ. ಆಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಗೀತಾ ತಿಳಿಸಿದ್ದಾರೆ.  

ಈ ಬಾರಿ ನಡೆದ ಲೋಕ್ ಅದಾಲತ್‍ನಲ್ಲಿ ವಿಶೇಷವಾಗಿ 41 ಪಾಲು ವಿಭಾಗದ ಪ್ರಕರಣಗಳು, 80 ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, 200 ಚೆಕ್ ಬೌನ್ಸ್ ಪ್ರಕರಣ, 42 ಅಪರಾಧಿಕ ಕಾಂಪೌಂಡ್ ಪ್ರಕರಣಗಳು, 76 ಅಪಘಾತ ವಿಮಾ ಪ್ರಕರಣಗಳು, 14 ಕೌಟುಂಬಿಕ ಪ್ರಕರಣಗಳು, 144 ಅಮಲ್ ಜಾರಿ ಪ್ರಕರಣಗಳು, ಕರಾರಿಗೆ ಸಂಬಂಧಿಸಿದ 10 ದಾವೆಗಳು, ವಿವಿಧ ರೀತಿಯ 94 ಸಿವಿಲ್ ದಾವೆಗಳು, ಅಪರಾಧಿಕ ಕಾಂಪೌಂಡಬಲ್ ಪ್ರಕರಣಗಳು (ವಿವಿಧ ಅಪರಾಧಿಕ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು) ಇತರೆ ಅಪರಾಧಿಕ ಕಾಯ್ದೆಗಳ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ.

ಅಲ್ಲದೇ, ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಒಟ್ಟು 9 ದಂಪತಿಗಳು, ಅಂದರೆ ಹಿರಿಯೂರು ನ್ಯಾಯಾಲಯದಲ್ಲಿ ಮೂರು ದಂಪತಿಗಳು, ಮೊಳಕಾಲ್ಮೂರು ನ್ಯಾಯಾಲಯದಲ್ಲಿ ಇಬ್ಬರು ಹಾಗೂ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ನ್ಯಾಯಾಲಯದಲ್ಲಿ ತಲಾ ಒಂದು ದಂಪತಿ ತಮ್ಮ ವೈಮನಸ್ಸು ಬಿಟ್ಟು ಮತ್ತೆ ಒಂದಾಗಿದ್ದಾರೆ.

ವಿಶೇಷವಾಗಿ ಸುಮಾರು 374 ಸಿವಿಲ್ ದಾವೆಗಳು ರಾಜಿಯಾಗಿರುತ್ತದೆ. ಅಲ್ಲದೇ 200 ಚೆಕ್ ಅಮಾನ್ಯ ಪ್ರಕರಣಗಳು ರಾಜಿಯಾಗಿದ್ದು,  ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಒಟ್ಟಾರೆ ಮೊತ್ತ ರೂ 17,36,39,597/- ಆಗಿರುತ್ತದೆ.

ಮುಂಬರುವ ಲೋಕ್ ಅದಾಲತ್‍ನಲ್ಲಿ ಇನ್ನೂ ಹೆಚ್ಚು ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಗೀತಾ ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks