ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ಹೀಗಾಗಿ ಚಳಿಗಾಲವೂ ಜಾಸ್ತಿ ಎಂದೇ ನಂಬಲಾಗಿತ್ತು. ಕೆರೆ ಕಟ್ಟೆಗಳೆಲ್ಲ ತುಂಬಿ ತುಳುಕುತ್ತಿದ್ದ ಕಾರಣಕ್ಕೆ ಚಳಿ ಜಾಸ್ತಿಯಾಗಲಿದೆ ಎಂದು ಭಾವಿಸಲಾಗಿತ್ತು. ಹಾಗೇ ಬೇಸಿಗೆಯೂ ತಡವಾಗಬಹುದು ಎಂದು ಊಹಿಸಲಾಗಿತ್ತು. ಮಾರ್ಚ್ ವೇಳೆಗೆ ಬೇಸಿಗೆ ಶುರುವಾಗುವ ಲಕ್ಷಣಗಳಿವೆ ಎನ್ನಲಾಗಿತ್ತು. ಆದರೆ ಇದೀಗ ಮಾರ್ಚ್ ಗಿಂತ ಮೊದಲೇ ಬೇಸಿಗೆಯ ಬಿಸಿ ಜೋರಾಗಿ ಶುರುವಾಗಿದೆ. ಶಿವರಾತ್ರಿ ಬಂದ ಬಳಿಕ ಶಿವ ಶಿವ ಅಂತ ಚಳಿ ಹೋಗುತ್ತದೆ ಎಂಬ ಮಾತಿದೆ. ಆದರೆ ಈಗಲೇ ಚಳಿ ಮಾಯಾವಾಗಿದೆ.
ಇಂದು ಬೆಂಗಳೂರಿನಲ್ಲಿ ಗರಿಷ್ಠ 31.9 ಡಿಗ್ರಿ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 28 ರಿಂದ 29 ಸೆಲ್ಸಿಯಸ್ ದಾಖಲಾಗಿದೆ. ತಮಿಳುನಾಡಿನಿಂದ ಪೂರ್ವ ಮಾರುತಗಳು ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಫೆಬ್ರವರಿ 5 ಬುಧವಾರದ ನಂತರ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ತಿಂಗಳಲ್ಲಿಯೇ ಬಿಸಿಲು ಹೀಗಿದೆ ಎಂದರೆ ಮಾರ್ಚ್ ನಲ್ಲಿ ನಗರದ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಹಲವು ಜಿಲ್ಲೆಗಳಲ್ಲಿ ಇದೇ ತಿಂಗಳಲ್ಲಿ 32 ರಿಂದ 37 ಡಿಗ್ರಿವರೆಗೆ ತಾಪಮಾನ ದಾಖಲು ಆಗುತ್ತಿದೆ. ಬೇಸಿಗೆಯ ಬಿಸಿಲಿನ ತೀವ್ರತೆಯನ್ನು ಎದುರಿಸಲು ರಾಜ್ಯದ ಜನತೆ ಸಿದ್ಧವಾಗಬೇಕಿದೆ. ಹವಮಾನ ಇಲಾಖೆ ಕೂಡ ಈ ಸಂಬಂಧ ಎಚ್ಚರಿಕೆಯನ್ನು ನೀಡಿದೆ. ಬೇಸಿಗೆಯಲ್ಲಿ ಮಕ್ಕಳನ್ನು ಇನ್ನು ಕಾಳಜಿಯಿಂದ ನೋಡಿಕೊಳ್ಳಬೇಕಿದೆ. ಬಿಸಿಲಿನಲ್ಲಿ ಡಿಹೈಡ್ರೇಷನ್ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಕ್ಕಳಿಗೆ ನೀರಿನ ಅಂಶ ಹೆಚ್ಚಾಗಿ ದೇಹ ಸೇರುವಂತೆ ನೋಡಿಕೊಳ್ಳಿ. ಹೊರಗೆ ಹೋಗುವಾಗ ಕೊಡೆಯೂ ಜೊತೆಗೆ ಇರಲಿ.