ರೋಗಿಗಳ ಭಯವನ್ನೇ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡಿವೆ : ಡಾ.ಶಿವಕುಮಾರ್

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13 : ಕಾಯಿಲೆಗೆ ಮೂಲ ಸಮಸ್ಯೆ ಗೊತ್ತಾದರೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಆಸ್ಪತ್ರೆಗಳು ಆರೈಕೆ ಕೇಂದ್ರಗಳಾಗುವ ಬದಲು ಉದ್ಯಮಗಳಾಗಿ ತಲೆ ಎತ್ತುತ್ತಿವೆ. ಮಾನವೀಯತೆ, ಕಾಳಜಿಯಿಟ್ಟುಕೊಂಡು ರೋಗಿಗಳ ಆರೈಕೆ ಮಾಡಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ್ ಆರ್. ಕರೆ ನೀಡಿದರು.

 

ಕೋಟೆ ಮುಂಭಾಗವಿರುವ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‍ನ 33 ನೇ ಬ್ಯಾಚ್ ವಿದ್ಯಾರ್ಥಿಗಳಿಂದ ಸೋಮವಾರ ನಡೆದ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ನರ್ಸಿಂಗ್ ಎಂದ ಕೂಡಲೆ ಮದರ್ ಥೆರೇಸಾ, ಫ್ಲಾರೆನ್ಸ್ ನೈಟಿಂಗೇಲ್ ಇವರುಗಳ ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ಪುರಾಣಗಳ ಕಾಲದಿಂದಲೂ ಆಯುರ್ವೇದ, ಗಿಡಮೂಲಿಕೆ, ನಾಟಿ ವೈದ್ಯ ಪದ್ದತಿಯಿದೆ. ಸಾವಿರಾರು ವರ್ಷಗಳಿಂದಲೂ ಈ ವೈದ್ಯಕೀಯ ಚಿಕಿತ್ಸೆ ಅನೇಕ ಕಾಯಿಲೆಗಳ ನಿವಾರಣೆಗೆ ನೆರವಾಗುತ್ತಿದೆ. ಒಂದು ತಲೆಮಾರಿನಿಂದ ಮತ್ತೊಂದು ಪೀಳಿಗೆಗೆ ನಾಟಿ ವೈದ್ಯ ಪದ್ದತಿಯನ್ನು ಹೇಳಿಕೊಡದ ಕಾರಣ ನಶಿಸುತ್ತಿದೆ ಎಂದು ವಿಷಾಧಿಸಿದರು.

ಹುದುಗಿ ಹೋಗಿರುವ ಪರಂಪರೆಯನ್ನು ಹೊರತೆಗೆಯುವ ಕೆಲಸವಾಗಬೇಕು. ಹಿಂದಿನ ಕಾಲದಲ್ಲಿ ಗರ್ಭಿಣಿಯರು ಹೊಲ ಮನೆ ಕೆಲಸ ಮಾಡುತ್ತಿದ್ದರು. ಈಗ ದೈಹಿಕ ಶ್ರಮ ಕಡಿಮೆಯಾಗಿರುವುರಿಂದ ಸಿಜೇರಿಯನ್, ಸ್ಕ್ಯಾನಿಂಗ್ ಇವುಗಳು ಜಾಸ್ತಿಯಾಗಿದೆ. ಯಾವ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸುತ್ತಿದ್ದರು. ಆರೈಕೆ, ಕಾಳಜಿಯಿಲ್ಲದೆ ಯಾವ ರೋಗವು ವಾಸಿಯಾಗುವುದಿಲ್ಲ. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಸಾಕಷ್ಟು ಅವಕಾಶಗಳಿವೆ. ಆರೋಗ್ಯವೆಂದರೆ ಭಯ. ಭಯವನ್ನೇ ಆಸ್ಪತ್ರೆಗಳು ಬಂಡವಾಳವನ್ನಾಗಿ ಮಾಡಿಕೊಂಡಿವೆ. ಇವೆಲ್ಲವನ್ನು ಹೋಗಲಾಡಿಸಿ ನಿಸ್ವಾರ್ಥ ಸೇವೆ ಮಾಡಿ ರೋಗಿಗಳ ಜೀವ ಕಾಪಾಡಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಒಳ್ಳೇದು, ಕೆಟ್ಟದ್ದು, ಮೋಸ, ವಂಚನೆಯಿದೆ. ಎಲ್ಲವನ್ನು ಹೊರತುಪಡಿಸಿ ಸೇವೆಯಲ್ಲಿ ತೊಡಗಿಕೊಳ್ಳಿ. ನಾಟಿ ವೈದ್ಯ ಪದ್ದತಿಯನ್ನ ಕಾಪಾಡಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ. ಆರೈಕೆಯಿಂದ ಅನಾರೋಗ್ಯ ಹೆಚ್ಚುತ್ತಿದೆ. ಎಲ್ಲವೂ ಸುಧಾರಣೆಯಾಗಬೇಕು. ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಬೇಡಿ. ಶಿಕ್ಷಣ, ಸರ್ಟಿಫಿಕೇಟ್ ಜೊತೆ ಅನುಭವ ಮುಖ್ಯ ಎಂದರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನರ್ಸಿಂಗ್ ಶಿಕ್ಷಣ ಪಡೆದವರು ಹೊರಗಡೆ ಹೋಗಿ ಸೇವೆ ಸಲ್ಲಿಸುವ ವಿಫುಲ ಅವಕಾಶವಿದೆ. ಕೇವಲ ಹಣ ಗಳಿಸುವುದಷ್ಟೆ ಮುಖ್ಯವಲ್ಲ. ಸೇವಾ ಮನೋಭಾವನೆಯಿಟ್ಟುಕೊಳ್ಳಿ. ರೋಗಿಗಳ ಕಾಯಿಲೆಯನ್ನು ವಾಸಿ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೊರೋನಾದಲ್ಲಿ ಜನ ಎಷ್ಟು ಆತಂಕಕ್ಕೊಳಗಾಗಿದ್ದರು ಎನ್ನುವುದನ್ನು ಎಲ್ಲರೂ ಗಮನಿಸಿದ್ದೀರ. ಆಗಿನ ಸಂದರ್ಭಕ್ಕೂ ಈಗಿನ ಆರೋಗ್ಯ ಪರಿಸ್ಥಿತಿಗೂ ವ್ಯತ್ಯಾಸವಿದೆ. ಒತ್ತಡದ ಜೀವನ, ಬದಲಾದ ಜೀವನ ಶೈಲಿ, ಆಹಾರ ಸೇವನೆಗಳಿಂದ ಸಾಕಷ್ಟು ಜನ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ಭಯ ಹುಟ್ಟಿಸುತ್ತದೆ. ಮಿತವಾದ ಆಹಾರ ಸೇವನೆ ಸದೃಢ ಆರೋಗ್ಯಕ್ಕೆ ಸೋಪಾನವಾಗಲಿದೆ ಎಂದು ನುಡಿದರು.

ರಾಜಾವೀರ ಮದಕರಿನಾಯಕ ಚಿತ್ರದುರ್ಗದ ಏಳು ಸುತ್ತಿನ ಕೋಟೆಯಲ್ಲಿ ಆಳ್ವಿಕೆ ನಡೆಸಿದ್ದಾರೆ. ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಕೋಟೆ ನಶಿಸಿ ಹೋಗಲು ಬಿಡಬಾರದು. ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಮದಕರಿನಾಯಕ ಕೇವಲ ನಾಯಕ ಜನಾಂಗಕ್ಕೆ ಸೀಮಿತವಲ್ಲ. ಎಲ್ಲಾ ಜಾತಿ ಧರ್ಮದವರ ಹಿತ ಬಯಸಿದ್ದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಸಾಗರ್, ಎಸ್.ಎಲ್.ವಿ.ಕಾಲೇಜ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲರಾದ ಡಾ.ಮಹಂತೇಶ್ ಎಂ.ಎಂ.
ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯರಾದ ಮಂಜುಳ ಆರ್, ಹಿರಿಯ ಉಪನ್ಯಾಸಕಿ ವಿ.ಎಸ್.ಪೋತದಾರ್ ಇವರುಗಳು ವೇದಿಕೆಯಲ್ಲಿದ್ದರು.
ಮದಕರಿನಾಯಕ ವಿದ್ಯಾಸಂಸ್ಥೆಯ ಉಸ್ತುವಾರಿ ಮಹಂತೇಶ್ ಹುಣಸೆಕಟ್ಟೆ, ನರ್ಸಿಂಗ್ ಕಾಲೇಜು ಉಪನ್ಯಾಸಕರುಗಳಾದ ಶ್ರೀವಿದ್ಯಾ, ಪೂಜಾ ಕೆ. ಇವರುಗಳು ಸಮಾರಂಭದಲ್ಲಿದ್ದರು.
2024-25 ರ ಸಾಲಿನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Share This Article
Enable Notifications OK No thanks